ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳನ್ನು ಗುರುತಿಸಲಾಗಿದ್ದು, ಅವರ ಕೃತ್ಯವನ್ನು ಸಾಬೀತು ಮಾಡಲು ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲಾಗುತ್ತಿದೆ ಎಂದು ರಾಜ್ಯ ಸರ್ಕಾರವು ಹೇಳಿದೆ.
ಆಂಗ್ಲ ಸುದ್ದಿವಾಹಿನಿಯೊಂದಕ್ಕೆ ಮಾಹಿತಿ ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು, ಈ ಕೃತ್ಯ ಎಸಗಿರುವವರು ಯಾರು ಎನ್ನುವುದು ನಮಗೆ ತಿಳಿದಿದೆ. ಆದರೆ ಹೆಚ್ಚಿನ ಮಾಹಿತಿ ನೀಡುವುದರಿಂದ ತನಿಖೆಗೆ ತೊಂದರೆಯಾಗಬಹುದು ಎಂದು ಅವರು ತಿಳಿಸಿದರು.
ಕಳೆದ ತಿಂಗಳು ಬೆಂಗಳೂರಿನಲ್ಲಿ ಗೌರಿ ಲಂಕೇಶ್ ಮನೆಯ ಸಮೀಪವೇ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ದುಷ್ಕರ್ಮಿಯೊಬ್ಬ ತನ್ನ ಮುಖ ಮುಚ್ಚಲು ಹೆಲ್ಮೆಟ್ ಧರಿಸಿದ್ದ. ಇದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆದರೂ ಇದುವರೆಗೆ ದುಷ್ಕರ್ಮಿಗಳ ಪತ್ತೆ ಮಾಡಲು ಸಾಧ್ಯವಾಗದಿರುವ ಕಾರಣ ರಾಜ್ಯ ಸರ್ಕಾರವು ಮುಜುಗರಕ್ಕೆ ಒಳಗಾಗಿದೆ.
2015ರಲ್ಲಿ ಧಾರವಾಡದಲ್ಲಿ ಹತ್ಯೆಯಾದ ಬುದ್ಧಿಜೀವಿ ಎಂಎಂ ಕಲ್ಬುರ್ಗಿ ಅವರ ಹತ್ಯೆ ಮತ್ತು ಗೌರಿ ಹತ್ಯೆಗೆ ಸಾಮ್ಯತೆಯಿದೆ ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ. ಪತ್ರಕರ್ತೆ ಹಾಗು ಬುದ್ಧಿಜೀವಿಯಾಗಿದ್ದ ಗೌರಿ ಲಂಕೇಶ್ ಅವರು ಬಲಪಂಥೀಯ ಸಂಘಟನೆಗಳ ವಿರೋಧ ಕಟ್ಟಿಕೊಂಡಿದ್ದರು.
ಕಲ್ಬುರ್ಗಿ ಅವರ ಹತ್ಯೆಗೆ ಬಳಸಿದ ಗುಂಡುಗಳ ಮೂಲ ಕಂಡುಹಿಡಿಯಲು ಅವುಗಳನ್ನು ಸ್ಕಾಟ್ ಲೆಂಡ್ ಯಾರ್ಡ್ ಗೆ ಕಳುಹಿಸಿಕೊಡಲಾಗಿದೆ. ಆದರೆ ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ಗುಂಡುಗಳ ಬಗ್ಗೆ ಮಾಹಿತಿ ಸಿಕ್ಕಿದರೆ, ಎರಡು ಹತ್ಯೆಗಳ ಸಂಪರ್ಕ ತಿಳಿದುಬರುವುದು ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ.
ಗೌರಿ ಲಂಕೇಶ್ ಹತ್ಯೆಯನ್ನು ಟ್ವಿಟ್ಟರ್ ನಲ್ಲಿ ಬಿಜೆಪಿ ಬೆಂಬಲಿಗರು ಸಂಭ್ರಮಿಸಿದ್ದಾರೆ ಎನ್ನುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇವುಗಳಲ್ಲಿನ ಕೆಲವು ಖಾತೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಫಾಲೋ ಮಾಡುತ್ತಿದ್ದಾರೆ. ಇದರ ಬಗ್ಗೆ ಟೀಕೆ ವ್ಯಕ್ತವಾದರೂ ಫಾಲೋ ಮಾಡುವುದನ್ನು ನಿಲ್ಲಿಸಿಲ್ಲ.
ಮೋದಿ ಅವರು ಹತ್ಯೆಯ ಬಗ್ಗೆ ಮೌನವಾಗಿರುವುದು ತುಂಬಾ ಚಿಂತೆಯುಂಟು ಮಾಡಿದೆ ಎಂದು ದಕ್ಷಿಣ ಭಾರತದ ಜನಪ್ರಿಯ ನಟ ಪ್ರಕಾಶ್ ರೈ ಹೇಳಿದ್ದಾರೆ.
ನನಗೆ ಸಿಕ್ಕಿರುವ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಧಾನಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಟನೆಗೆ ನೀಡಬೇಕು ಎಂದು ಪ್ರಕಾಶ್ ರೈ ವ್ಯಂಗ್ಯವಾಡಿದ್ದಾರೆ.