ಹೊಸದಿಲ್ಲಿ: ತಮಿಳುನಾಡಿಗೆ ಡಿಸೆಂಬರ್ ಅಂತ್ಯದವರೆಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸೋಮವಾರ ತಿಳಿಸಿದೆ. “ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವವಿದೆ. ಪ್ರಸ್ತುತ ಜಲಾಶಯಗಳಲ್ಲಿರುವ ನೀರನ್ನು ತಮಿಳುನಾಡಿಗೆ ಹರಿಸಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಹೀಗಾಗಿ ಡಿಸೆಂಬರ್ ಅಂತ್ಯದ ಬಳಿಕವಷ್ಟೇ ತಮಿಳುನಾಡಿಗೆ ನೀರು ಬಿಡಲು ಸಾಧ್ಯ” ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಗೆ ಹೇಳಿದೆ.
ಕಳೆದ ಸೆಪ್ಚೆಂಬರ್ 20ರಂದು ತಮಿಳುನಾಡಿಗೆ ನಿತ್ಯ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ನೀಡಿದ್ದ ಆದೇಶವನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ನಡೆಯುತ್ತಿದ್ದು, ವಿಚಾರಣೆಯಲ್ಲಿ ಕರ್ನಾಟಕ ಡಿಸೆಂಬರ್ ಅಂತ್ಯದವೆರಗೂ ನೀರು ಬಿಡಲು ಸಾಧ್ಯವಿಲ್ಲ ಎಂದು ತನ್ನ ವಾದ ಮಂಡಿಸಿದೆ.
ಕಾವೇರಿ ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಈ ವರೆಗೂ 3 ಮಧ್ಯಂತರ ಆದೇಶಗಳನ್ನು ನೀಡಿದ್ದು, ಈ ಮೂರು ಆದೇಶಗಳ ಅನ್ವಯ ಕರ್ನಾಟಕ ತಮಿಳುನಾಡಿಗೆ ಎಷ್ಟು ಪ್ರಮಾಣದ ನೀರು ಹರಿಸಿದೆ ಎಂಬ ಲೆಕ್ಕಾಚಾರ ಮಾಡಬೇಕಿದೆ. ಈ ಹಿಂದೆ 52 ಟಿಎಂಸಿ ನೀರನ್ನು ಬಿಡುವಂತೆ ತಮಿಳುನಾಡು ಕೋರಿದೆಯಾದರೂ, ಈ ಸಂಬಂಧ ಸುಪ್ರೀಂ ಕೋರ್ಟ್ 3 ಮಧ್ಯಂತರ ಆದೇಶಗಳನ್ನು ಹೊರಡಿಸಿದೆ. ಹೀಗಾಗಿ ಈ ಆದೇಶಗಳ ಬಳಿಕ ಕರ್ನಾಟಕ ಹರಿಸಿದ ನೀರಿನ ಪ್ರಮಾಣದ ಲೆಕ್ಕಾಚಾರ ಬಿಳಿಗುಂಡ್ಲುವಿನ ಮಾಪನದಲ್ಲಿ ಇಂದು ನಡೆಯುವ ಸಾಧ್ಯತೆ ಇದೆ. ಇದೇ ವೇಳೆ ಕಳೆದ ಸೆಪ್ಟೆಂಬರ್ 20ರಂದು ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನು ಪರಿಷ್ಕರಿಸುವಂತೆ ಕರ್ನಾಟಕ ಇಂದು ಸುಪ್ರೀಂ ಕೋರ್ಟ್ ನಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಿದ್ದು, ಅದರ ವಿಚಾರಣೆಯನ್ನೂ ಕೂಡ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.