ಬೆಂಗಳೂರು: ಕಾಂಗ್ರೆಸ್ ಮುಂದಿನ ಅವಧಿಗೂ ನಾವೇ ಅಧಿಕಾರ ಹಿಡಿಯಬೇಕೆಂಬ ಹಠತೊಟ್ಟಿದ್ದರೆ, ಅದಕ್ಕೆ ಪ್ರತಿತಂತ್ರವೊಡ್ಡಿ ಮತದಾರರ ಸೆಳೆಯಲು ಬಿಜೆಪಿಯೂ ಸದ್ದಿಲ್ಲದೆ ಕಾರ್ಯತಂತ್ರ ರೂಪಿಸಿದ್ದು, ಎಲ್ಲವೂ ಸರಿ ಹೋದರೆ ಡಿ.ವಿ.ಸದಾನಂದಗೌಡ ಅವರನ್ನು ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ್ಷ ಅಮಿತ್ ಶಾ ಕೂಡ ಒಲವು ತೋರಿದ್ದಾರೆ ಎಂಬ ಮಾಹಿತಿಗಳು ರಾಜಕೀಯ ಪಡಸಾಲೆ ಹರಿದಾಡುತ್ತಿದೆ.
ನಾಡಧ್ವಜ, ನಮ್ಮ ಮೆಟ್ರೋದಲ್ಲಿ ಹಿಂದಿ ನಿಷೇಧ, ವೀರಶೈವ-ಲಿಂಗಾಯಿತ ಸಮುದಾಯಕ್ಕೆ ಪ್ರತ್ಯೇಕ ಧರ್ಮ, ರೈತರ ಸಾಲ ಮನ್ನಾ ಸೇರಿದಂತೆ ಹಲವು ವಿಚಾರಗಳಲ್ಲಿ ಕಾಂಗ್ರೆಸ್ ಸಕ್ರಿಯವಾಗಿದೆ. ಆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಗೆ ಟಾಂಗ್ ನೀಡಿದ್ದಾರೆ. ಇಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಳೆದ ಕೆಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದಾರೆ. ವೀರಶೈವ ಮತ್ತು ಲಿಂಗಾಯಿತ ವಿಚಾರಗಳು ಅವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಇನ್ನೊಂದಷ್ಟು ದಿನ ಮೌನವಾಗಿ ಕಾದು ನೋಡುವ ತಂತ್ರವನ್ನು ಅವರು ಅನುಸರಿಸಿದಂತೆ ಕಂಡು ಬರುತ್ತಿದೆ.
ಇನ್ನೊಂದೆಡೆ ಅಮಿತ್ಶಾ ಅವರು ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರನ್ನು ಕರೆದು ಚರ್ಚೆ ನಡೆಸಿದ್ದು, ಚುನಾವಣಾ ಹೊಣೆಯನ್ನು ಅವರಿಗೆ ವಹಿಸುವ ಲಕ್ಷಣಗಳು ಕಂಡು ಬರುತ್ತಿದೆ. ಮುಂದಿನ ತಿಂಗಳು ಕೇಂದ್ರ ಸಂಪುಟವನ್ನು ವಿಸ್ತರಣೆ ಮಾಡಲು ಪ್ರಧಾನಿ ಮೋದಿ ನಿರ್ಧರಿಸಿದ್ದು, ಈ ವೇಳೆ ಸದಾನಂದಗೌಡ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಟ್ಟು ರಾಜ್ಯದ ಹೊಣೆ ಹೊರಿಸುವ ಸಾಧ್ಯತೆಯಿದೆ ಎನ್ನುವುದು ಇದೀಗ ಕೇಳಿ ಬರುತ್ತಿರುವ ಸುದ್ದಿಯಾಗಿದೆ.
ಈಗಾಗಲೇ ಕರ್ನಾಟಕದಲ್ಲಿ ಬಿಜೆಪಿಯ ಪ್ರಾಬಲ್ಯ ಕುಗ್ಗಿದೆ. ಮುಂದಿನ ದಿನಗಳಲ್ಲಿ ಪಕ್ಷ ಪ್ರಭಾವ ಶಾಲಿಯಾಗಿ ಮತದಾರರನ್ನು ಸೆಳೆಯಬೇಕಾದರೆ ಕೇವಲ ಯಡಿಯೂರಪ್ಪ ಅವರೊಬ್ಬರಿಂದ ಸಾಧ್ಯವಿಲ್ಲ. ಹೀಗಾಗಿ ಒಕ್ಕಲಿಗ ನಾಯಕನ ಅಗತ್ಯವೂ ಇರುವುದರಿಂದಾಗಿ ಸದಾನಂದಗೌಡರಿಗೆ ಚುನಾವಣೆಯ ಹೊಣೆಗಾರಿಕೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಈ ಹಿಂದೆ ಡಿ.ವಿ.ಸದಾನಂದ ಗೌಡರು ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಸಮಯದಲ್ಲೇ ಬಿಜೆಪಿ ಅಧಿಕಾರ ಹಿಡಿದಿತ್ತು. ಇದು ಕೂಡ ಮುಂದಿನ ದಿನಗಳಲ್ಲಿ ಉಪಯೋಗಕ್ಕೆ ಬರುವ ಸಾಧ್ಯತೆ ಇದೆ. ಸದಾನಂದಗೌಡರಿಗೂ ಎಲ್ಲ ನಾಯಕರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ನಾಯಕತ್ವ ಗುಣವಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅದನ್ನು ಗುರುತಿಸಿ ಜವಬ್ದಾರಿಯುತ ಹುದ್ದೆಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತಂತೆ ನೈಜ ಮಾಹಿತಿ ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ