ಬೆಂಗಳೂರು: ಯಾರು ಯಾವುದೇ ಸಮೀಕ್ಷೆ ನಡೆಸಿದರೂ ಮುಂದಿನ ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಆಡಳಿತ ನಡೆಸುವುದು ಜೆಡಿಎಸ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ನಡೆಸಿದ ಖಾಸಗಿ ಸಂಸ್ಥೆಯ ವರದಿ ಪ್ರಕಾರ ಈ ಮಾತನ್ನು ಹೇಳುತ್ತಿದ್ದೇನೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ರಾಜ್ಯದಲ್ಲೇ ಮೊದಲ ಸ್ಥಾನಕ್ಕೆ ಬರಲಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಹುಮತಕ್ಕೆ ಅಗತ್ಯವಿರುವ 113 ಸ್ಥಾನಗಳನ್ನು ಪಡೆಯಲು ಶ್ರಮಿಸಲಾಗುತ್ತಿದ್ದು, ಬಿಜೆಪಿಗಿಂತ ಕನಿಷ್ಠ 10-15 ಸ್ಥಾನಗಳು ಜೆಡಿಎಸ್ ಗೆ ಹೆಚ್ಚುವರಿಯಾಗಿ ದೊರೆಯಲಿವೆ ಎಂಬುದಾಗಿ ಹೇಳಿದರು.
ಸಿ4 ಸಂಸ್ಥೆಯ ಸಮೀಕ್ಷೆ ಕಾಂಗ್ರೆಸ್ಗೆ ತಾತ್ಕಾಲಿಕವಾಗಿ ಆನಂದ ಅಷ್ಟೆ. ತಾವು ಕ್ಷೇತ್ರವಾರು ಸಮೀಕ್ಷೆ ನಡೆಸಿದ್ದೇವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಗುಪ್ತಚರ ಇಲಾಖೆಗಳ ಚುನಾವಣಾ ಪೂರ್ವ ವರದಿಯ ಮಾಹಿತಿಯೂ ನಮ್ಮಲ್ಲಿರುವುದಾಗಿ ಹೇಳಿದರು. ಚುನಾವಣಾ ಪೂರ್ವ ಸಮೀಕ್ಷೆ ನಡೆಸಿದ ಸಿ4 ಸಂಸ್ಥೆಯ ಮಾಲೀಕರು ಕೆಂಪಯ್ಯನವರು ಗೃಹ ಇಲಾಖೆಯ ಸಚಿವರು ಎಂದು ವೆಬ್ ಸೈಟ್ ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಕಾಂಗ್ರೆಸ್ ನ ಸಚಿವರೊಂದಿಗಿರುವ ಪೋಟೋವನ್ನು ಹಾಕಿದ್ದಾರೆ. ಇಂತಹ ಸಂಸ್ಥೆಯಿಂದ ಇನ್ನೆಂಥ ಸಮೀಕ್ಷೆ ಬರಹುದು ಎಂದು ವ್ಯಂಗ್ಯವಾಡಿದರು.
ಗಾಜಿನ ಮನೆಯಲ್ಲಿ ಕೂತು ವಿರೋಧ ಪಕ್ಷಗಳನ್ನು ಕೆರಳಿಸಬೇಡಿ. ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆಗಿದ್ದ ಉಮೇಶ್ ಅವರು ನೀಡಿದ್ದ ವರದಿ ಪ್ರಕಾರ ಎಷ್ಟು ಜನ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದೀರಿ? ಭ್ರಷ್ಟಾಚಾರ, ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನೀವು ಮರಳು ದಂಧೆ, ಮಟ್ಕಾ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.