ಬೆಂಗಳೂರು: ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆಗಳನ್ನು ಬಗೆಹರಿಸುವ ಬದಲಿಗೆ ಚಿನ್ನದ ರಥ ಅರ್ಪಣೆ ಮಾಡಲು ಹೊರಟಿರುವುದು ದೌರ್ಭಾಗ್ಯದ ಸಂಗತಿಯಾಗಿದೆ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ರಾಜ್ಯದಲ್ಲಿ ಬರಗಾಲವಿದ್ದು, ಜನರ ಕುಡಿಯೋ ನೀರಿನ ಸಮಸ್ಯೆಗೆ ಕಲ್ಮಶವಾಗಿರುವ ನದಿಗಳ ಶುದ್ಧೀಕರಣ ಮಾಡುವುದಾಗಲೀ, ಕಬ್ಬು ಬೆಳೆಗಾರರಿಗೆ ಕಬ್ಬಿನ ಬಾಕಿ ಹಣ 4000 ಕೋಟಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಕೂಡಿಸುವ ಬಗ್ಗೆ ಗಂಭೀರ ಚಿಂತನೆ ನಡೆಸದೆ ತಮ್ಮ ಹುದ್ದೆಯನ್ನು ಚಿನ್ನದ ರಥ ಅರ್ಪಣೆಗಾಗಿ ಮುಡಿಪಾಗಿಟ್ಟಿರುವುದು ಬೇಸರದ ಸಂಗತಿಯಾಗಿದೆ ಎಂದು ದೂರಿದ್ದಾರೆ.
ದೇವರಿಗೆ ಚಿನ್ನದ ರಥ ಉಡುಗೊರೆ ನೀಡುವುದು ವೈಯಕ್ತಿಕ ವಿಚಾರವಾಗಿದ್ದರೂ ಆರು ಕೋಟಿ ಜನರ ಪ್ರತಿನಿಧಿಯಾಗಿದ್ದೇನೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ಹೇಳಿರುವ ಅವರು, ಮುಖ್ಯಮಂತ್ರಿಗಳು ದೇಣಿಗೆ ಸಂಗ್ರಹಿಸಲು ಮುಂದಾದರೆ ದೇಣಿಗೆ ನೀಡಲು ನೂರಾರು ಜನರು ಮುಂದೆ ಬರುತ್ತಾರೆ. ಆ ಮೂಲಕ ಮುಖ್ಯಮಂತ್ರಿಗಳಿಂದ ಇತರೆ ಕೆಲಸಗಳನ್ನು ಮಾಡಿಸಿಕೊಳ್ಳಲು ಮುಂದಾಗಬಹುದು ಎಂಬ ಉದ್ದೇಶವೂ ದೇಣಿಗೆ ನೀಡುವವರಲ್ಲಿರುತ್ತದೆ ಎಂದರು.
ಈಗ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಂಬಿಕೆ, ಆಚಾರ, ವಿಚಾರಗಳು ವೈಯಕ್ತಿಕವಾಗಿದ್ದರೂ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ ಎಂಬುದನ್ನು ಮರೆಯಬಾರದು, ರಾಜ್ಯದ ಮತದಾರರು ನಾಸ್ತಿಕರು, ಆಸ್ತಿಕರು ಇರುತ್ತಾರೆ. ಆದರೆ ಇವೆಲ್ಲವನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಚಿಂತಿಸಬೇಕಾದ ಅಗತ್ಯತೆ ಇದೆ. ರಾಜ್ಯದ ಇತರ ದೇವಾಲಯಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಭಕ್ತಾದಿಗಳು ಪರದಾಡುವಂತಾಗಿದೆ. ಜನರಿಂದ ದೇಣಿಗೆ ಎತ್ತಿ ಚಿನ್ನದ ರಥ ಅರ್ಪಣೆ ಮಾಡುವ ಬದಲು ಇತರೆ ದೇವಸ್ಥಾನಗಳ ಮೂಲಭೂತ ಸೌಕರ್ಯಗಳನ್ನಾದರೂ ಒದಗಿಸುವ ಕಾರ್ಯಕ್ಕೆ ಮುಂದಾಗಲಿ ಎಂದು ಅವರು ಆಗ್ರಹಿಸಿದ್ದಾರೆ.