ಹುಬ್ಬಳ್ಳಿ: ಜನಸಂಖ್ಯೆ ಆಧಾರದ ಮೇಲೆ ಸವಲತ್ತು ಸಿಗಬೇಕು ಎನ್ನುವ ಕಾರಣದಿಂದಲೇ ಜಾತಿ ಜನಗಣತಿ ಮಾಡಿಸಲಾಗಿದೆ. ಅದರ ವರದಿಯೂ ಜನವರಿಗೆ ಸಿಗಲಿದೆ. ಆ ವರದಿಯನ್ನೂ ಗಮನದಲ್ಲಿ ಇಟ್ಟುಕೊಂಡು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮಾದಿಗರ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಂವಿಧಾನದ ಆಶಯ ಈಡೇರಬೇಕಾದರೆ ಜನಸಂಖ್ಯೆ ಆಧಾರಿತ ಮೀಸಲಾತಿ ಜಾರಿಗೆ ಬರಬೇಕು ಎಂಬುದು ನನ್ನ ಸ್ಪಷ್ಟ ನಿಲುವು. ಎಂತಹ ಅಡ್ಡಿ ಆತಂಕಗಳು ಎದುರಾದರೂ ಅದನ್ನು ಅನುಷ್ಠಾನಕ್ಕೆ ತರಲು ಸರಕಾರ ಬದ್ಧವಾಗಿದೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ನಾವೇನಿದ್ದರೂ ಅದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಹುದಷ್ಟೇ’ ಎಂದರು.
ರಾಜ್ಯದಲ್ಲಿ ಸದ್ಯ ಶೇ 50ರಷ್ಟು ಮೀಸಲಾತಿ ಇದ್ದು, ಅದನ್ನು ಶೇ 70ಕ್ಕೆ ಹೆಚ್ಚಿಸುವ ಸಂಬಂಧ ಸಂವಿಧಾನ ತಿದ್ದುಪಡಿಗೆ ಶಿಫಾರಸು ಮಾಡಲಾಗುವುದು. ಈ ವಿಷಯವನ್ನು ವಿಧಾನ ಪರಿಷತ್ತಿನಲ್ಲಿಯೂ ಪ್ರಸ್ತಾಪ ಮಾಡಿದ್ದು, ಮುಂದಿನ ಅಧಿವೇಶನದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.