ಮೈಸೂರು: 2018ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನ 124 ಜನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು. ನಂಜನಗೂಡು ಗುಂಡ್ಲಪೇಟೆ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಬಗ್ಗೆ ವರಿಷ್ಟರೊಂದಿಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ನಗರದ ಸರ್ಕಾರಿ ಅತಿಥಿಗೃಹದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಅಲ್ಲಿನ ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದುಕೊಂಡಿದ್ದೇನೆ. ಈ ಎರಡು ಕಡೆ ಜೆಡಿಎಸ್ ಅಭ್ಯರ್ಥಿ ಹಾಕುವ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಆದರೆ ನಮ್ಮಲ್ಲಿ ಅಭ್ಯರ್ಥಿಗಳಿಗೇನೂ ಕೊರತೆಯಿಲ್ಲ ಈ ಬಗ್ಗೆ ವರಿಷ್ಟರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಿನ್ನೆ ನಂಜನಗೂಡಿನಲ್ಲಿ ನನ್ನನ್ನು ಸ್ವಾಗತಿಸಲು ನೂರಾರು ಬೈಕ್ ನಲ್ಲಿ ಬಂದಿದ್ದ ಯುವಕರನ್ನು ಪೊಲೀಸರು ತಡೆದು ಬೈಕ್ ಗಳನ್ನ ವಶಕ್ಕೆ ಪಡೆದಿದ್ದಾರೆ. ಇನ್ನೂ ಚುನಾವಣೆಯ ಪ್ರಕಟವಾಗಿಲ್ಲ, ಯಾವುದೇ ನೀತಿ ಸಂಹಿತೆ ಜಾರಿಯಾಲಿಲ್ಲ. ಆಗಲೇ ಸರ್ಕಾರ ಒಂದು ರೀತಿಯಲ್ಲಿ ದಬ್ಬಾಳಿಕೆಯನ್ನ ನಡೆಸುತ್ತಿದೆ. ಈ ಬಗ್ಗೆ ದೇವೇಗೌಡರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜೊತೆ ಮಾತುಕತೆ ನಡೆಸಿದ್ದಾರೆ ಎಂದ ಕುಮಾರಸ್ವಾಮಿ ಎರಡೂ ಕಡೆ ಜೆಡಿಎಸ್ಗೆ ಜನರ ಬೆಂಬಲ ಇದೆ. ಗುಂಡ್ಲುಪೇಟೆಯಲ್ಲಿ ಮೊದಲಿನ ಪರಿಸ್ಥಿತಿ ಈಗಿಲ್ಲ. ಪರಿಸ್ಥಿತಿ ಬದಲಾಗಿದೆ. ಈಗಾಗಲೇ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಎರಡು ಕಡೆ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಕಾರ್ಯಕರ್ತರ ಅಭಿಪ್ರಾಯವೇ ಅಂತಿಮವಾಗಿದ್ದು, ಅವರ ಅಭಿಪ್ರಾಯದಂತೆ ಎರಡು ಉಪಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಕಳಲೆ ಕೇಶವಮೂರ್ತಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ, ಕಳೆದ ಎರಡು ಬಾರಿ ಜೆಡಿಎಸ್ ಅಭ್ಯರ್ಥಿ ಆಗಿ ಸೋಲನ್ನು ಅನುಭವಿಸಿದ್ದು ಆರ್ಥಿಕವಾಗಿ ಕುಗ್ಗಿದ್ದಾರೆ, ಆದರಿಂದ ಕಾಂಗ್ರೆಸ್ ಸೇರಿರಬಹುದ ಎಂದು ಮಾರ್ಮಿಕವಾಗಿ ಹೇಳಿದರು. ಜೆಡಿಎಸ್ ಪಕ್ಷ ಕಾಂಗ್ರೆಸ್ ಗೆ ಸರಿಸಾಟಿ ಅಲ್ಲಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಅವರ ಮಾತನ್ನು ಒಪ್ಪಿಕೊಳ್ಳುತ್ತೇನೆ. ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕಳೆದುಕೊಂಡಿದೆ. ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ನಮ್ಮ ಪಕ್ಷದವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆದುಕೊಂಡು ಹೋಗಿ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ. ಈ ಮೂಲಕ ನಮ್ಮ ಪಕ್ಷ ಕಾಂಗ್ರೆಸ್ ಗೆ ಸರಿಸಾಟಿ ಅಲ್ಲ ಎಂದು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಆಪರೇಷನ್ ಚುನಾವಣೆ ವೇಳೆ 20 ಚುನಾವಣೆ ಯನ್ನು ಎದುರಿಸಿದ್ದೇನೆ.ನನ್ನಲ್ಲಿ ಯಾವುದೇ ಗೊಂದಲವೂ ಇಲ್ಲ. ಭಯವೂ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿಗಳ ದರಿದ್ರವಿದೆ. ಪಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೇ ಇಲ್ಲವಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಬಿಜೆಪಿಯವರು ಹೊಸಮುಖಗಳಿಗೆ ಅವಕಾಶ ಕೊಡುತ್ತಿವೆ. ಮುಖಂಡರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಇದು ರಾಜಕೀಯ ದ್ರುವೀಕರಣವಲ್ಲ. 150ಸ್ಥಾನ ಗೆದ್ದಿದ್ದೇವೆ ಅಂತ ಹೇಳುತ್ತಾರೆ. ಕಾಂಗ್ರೆಸ್ ನವರು ನಾವು ಕೂಡ ಮತ್ತೆ ಅಧಿಕಾರದಲ್ಲಿರುತ್ತೇವೆ ಎನ್ನುತ್ತಾರೆ ಎರಡು ರಾಷ್ಟ್ರೀಯ ಪಕ್ಷಗಳ ಹೇಳಿಕೆಗಳಿಗೇನೂ ಕೊರತೆಯಾಗಿಲ್ಲ. ಈ ಸರ್ಕಾರದಲ್ಲಿ ಆಡಳಿತ ನಡೆಸುತ್ತಿರುವವರು ವೀರಪ್ಪನ್ ಗಿಂತಲೂ ಕೆಟ್ಟ ಜನರು ಎಂದು ಲೇವಡಿಯಾಡಿದರು.
ಡೈರಿಯಲ್ಲಿರುವುದು ಸತ್ಯ:
ಗೋವಿಂದ ರಾಜು ಡೈರಿ ಕುರಿತು ಮಾತನಾಡಿದ ಅವರು ಡೈರಿಯಲ್ಲಿರುವುದು ಬಿಜೆಪಿಯರಿಗೆ ಹೇಗೆ ಗೊತ್ತಾಯಿತು ಎಂಬುದು ಪ್ರಶ್ನೆ ಅದರ ಬಗ್ಗೆ ತನಿಖೆಯಾಗಬೇಕು ಎಂದು ಗೋವಿಂದರಾಜು ಹೇಳಿದ್ದಾರೆ. ಹಾಗಾದರೇ ವಿವಿಧ ಇಲಾಖೆಗಳಿಂದ ಹಣ ವಸೂಲಿ ಮಾಡಿ ಹೈಕಮಾಂಡ್ ಗೆ ಕಪ್ಪ ಕೊಟ್ಟಿರುವುದು ಡೈರಿಯಲ್ಲಿ ಉಲ್ಲೇಖವಿದೆ ಎಂಬುದು ಸತ್ಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಮೇಕೆದಾಟು ಯೋಜನೆಗೆ ಮುಂಬರುವ ಬಜೆಟ್ ನಲ್ಲಿ ಪ್ಯಾಕೇಜ್ ಘೋಷಣೆ ಮಾಡದೆ ಸಂಪೂರ್ಣವಾಗಿ 5 ಸಾವಿರ ಕೋಟಿ ಹಣವನ್ನ ಮೀಸಲಿಟ್ಟು ಯೋಜನೆಯನ್ನ ಸಂಪೂರ್ಣವಾಗಿಗೊಳಸಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡಿದರು.