ಬೆಂಗಳೂರು: ಬಾಲಕ ಪ್ರವೀಣ್ ಮೇಲಿನ ಬೀದಿ ನಾಯಿಗಳ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬಿಬಿಎಂಪಿ ಅಧಿಕಾರಿ ಹಾಗೂ ಗುತ್ತಿಗೆದಾರ ಸೇರಿ ಮೂವರನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ಮಹದೇವಪುರವಲಯದ ಸಹಾಯಕ ನಿರ್ದೇಶಕ (ಪಶುಪಾಲನೆ) ಡಾ.ಶ್ರೀರಾಮ್, ಹಿರಿಯ ಪಶುವೈದ್ಯಕೀಯ ಪರೀಕ್ಷಕ ಅರುಣ್ ಮುತಾಲಿಕ್ ದೇಸಾಯಿ ಹಾಗೂ ಗುತ್ತಿಗೆದಾರ ರವಿಶಂಕರ್ ಬಂಧಿತರಾಗಿದ್ದಾರೆ.
ವಿಭೂತಿಕೆರೆ ಸಮೀಪ ಪ್ರವೀಣ್ ಮೇಲೆ ನಾಯಿ ದಾಳಿ ಮಾಡಿದ ಸಂಬಂಧಿಸಿದಂತೆ ಆತನ ತಾಯಿ ದೂರು ನೀಡಿದ್ದರು.
ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸುವುದು ಹಾಗೂ ಅವುಗಳಿಗೆ ರೋಗ ನಿರೋಧಕ ಚುಚ್ಚು ಮದ್ದು ಹಾಕಿಸುವ ವಿಷಯದಲ್ಲಿ ಈ ಮೂವರು ನಿರ್ಲಕ್ಷ್ಯತನ ತೋರಿಸಿದ್ದರಿಂದ ನಾಯಿ ದಾಳಿಗೆ ಕಾರಣ ಎಂದು ದೂರಿದ್ದರು.
ಈ ಹಿನ್ನಲೆಯಲ್ಲಿ ಪ್ರಾಣಿಗಳ ಸಂರಕ್ಷಣೆ ವಿಷಯದಲ್ಲಿ ನಿರ್ಲಕ್ಷ್ಯತನ ತೋರಿದ (ಐಪಿಸಿ 289) ಹಾಗೂ ಆಜಾಗರೂಕತೆಯಿಂದ ಪ್ರಾಣಕ್ಕೆ ಸಂಚಕಾರ ತಂದ (338) ಆರೋಪಗಳಡಿ ಎಫ್ಐಆರ್ ದಾಖಲಾಗಿದೆ.