News Kannada
Friday, March 24 2023

ಬೆಂಗಳೂರು ನಗರ

ವಿಧಾನಸಭೆಯಲ್ಲಿ ಕೆ.ಎಸ್.ಈಶ್ವರಪ್ಪ- ಡಿ.ಕೆ.ಶಿವಕುಮಾರ್ ನಡುವೆ ವಾಗ್ವಾದ

Photo Credit :

ಬೆಂಗಳೂರು,ಫೆ.16 : ರಾಷ್ಟ್ರಧ್ವಜ ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ್ದ ಹೇಳಿಕೆ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ-ಕಾಂಗ್ರೆಸ್ ಸದಸ್ಯರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದು ಗದ್ದಲ-ಗೊಂದಲ- ಕೋಲಾಹಲದಿಂದ ಸದನ ಮುಂದೂಡಿದ ಪ್ರಸಂಗ ಜರುಗಿತು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಾ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಅವರ ವಿರುದ್ಧ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.

ಇದನ್ನು ನಿರಾಕರಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈಶ್ವರಪ್ಪ ಅವರು ರಾಷ್ಟ್ರ ಧ್ವಜಕ್ಕೆ ಎಲ್ಲೂ ಅಗೌರವ ತೋರಿಲ್ಲ, ಅವಮಾನ ಆಗಿಲ್ಲ. ದೇಶ ದ್ರೋಹವೂ ಆಗಿಲ್ಲ. ಅವರ ಹೇಳಿಕೆ ಪೂರ್ಣಪಾಠವನ್ನು ಪರಿಗಣಿಸಬೇಕು. ರಾಷ್ಟ್ರ ಧ್ವಜಕ್ಕೆ ಗೌರವ ಕೊಡುವುದಾಗಿ ಹೇಳಿದ್ದಾರೆ. ಹೀಗಾಗಿ ನಿಲುವಳಿ ಸೂಚನೆಯಡಿ ಬರುವುದಿಲ್ಲ. ಅದನ್ನು ತಳ್ಳಿ ಹಾಕಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಇದಕ್ಕೂ ಮುನ್ನ ಮಾತನಾಡಿದ ಸಿದ್ದರಾಮಯ್ಯ, ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಈಶ್ವರಪ್ಪ ಅವರು ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿದ್ದಾರೆ. ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಪ್ರತಿಯೊಬ್ಬ ಪ್ರಜೆಯ ಗೌರವದ ಸಂಕೇತ. ಫೆ.9ರಂದು ಸಚಿವರು ಹೇಳಿಕೆ ನೀಡಿದ್ದರು. ಈವರೆಗೂ ಸರ್ಕಾರ ಕ್ರಮ ಕೈಗೊಂಡಿಲ್ಲ. ಈಶ್ವರಪ್ಪನವರನ್ನು ಮುಖ್ಯಮಂತ್ರಿಗಳು ಸಚಿವ ಸ್ಥಾನದಿಂದ ವಜಾ ಮಾಡಬೇಕಿತ್ತು ಎಂದರು.

ಆಗ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು. ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಸಚಿವರ ವಿರುದ್ಧ ಮೊಕದ್ದಮೆ ಹೂಡಬೇಕು. ದೆಹಲಿಯಲ್ಲಿ ರೈತರು ಪ್ರತಿಭಟನೆ ಮಾಡುವಾಗ ಧ್ವಜ ಹಾರಿಸಿದ್ದರಿಂದ ಮೊಕದ್ದಮೆ ದಾಖಲಿಸಿದ್ದಾರೆ ಎನ್ನುತ್ತಿದ್ದಂತೆ, ಆರಗ ಜ್ಞಾನೇಂದ್ರ ಅವರು ಮಾತನಾಡಿ, ಖಲಿಸ್ಥಾನದ ಧ್ವಜ ಹಾರಿಸಿದ್ದರು ಎಂದರು.

ಆಗ ಮತ್ತೆ ಕಾಂಗ್ರೆಸ್-ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಇಡೀ ಸದನ ಗೊಂದಲದ ಗೂಡಾಯತು. ಬಿಜೆಪಿ ಶಾಸಕ ಸಿ.ಟಿ.ರವಿ, ರಾಷ್ಟ್ರಧ್ವಜ ಹಿಡಿದವರನ್ನು ಗುಂಡು ಹಾರಿಸಿದ್ದೀರಿ ಎಂದಾಗ ಮತ್ತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ಮುಗಿಲು ಮುಟ್ಟಿತು.
ಇದೇ ರೀತಿ ಪದೇ ಪದೇ ವಾಗ್ವಾದ, ಮಾತಿನ ಚಕಮಕಿ ನಡೆದು ಸದನ ಗೊಂದಲದಲ್ಲಿ ಮುಳುಗಿತು. ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಈಶ್ವಪ್ಪ ಇಲ್ಲೇ ಇದ್ದಾರೆ ಅವರ ಬಳಿ ಉತ್ತರ ಕೇಳೋಣ ಎಂದರು.

ಆರೋಪ-ಪ್ರತ್ಯಾರೋಪಗಳನ್ನು ಮೌನವಾಗಿಯೇ ಈಶ್ವರಪ್ಪ ಆಲಿಸುತ್ತಿದ್ದರು. ಆಗ ಚರ್ಚೆಗೆ ಅವಕಾಶ ಕೊಟ್ಟರೆ ರಾಷ್ಟ್ರಧ್ವಜಕ್ಕೆ ಸಂಬಂಸಿದ ಪೂರ್ಣ ವಿವರ ನೀಡುವುದಾಗಿ ಸಿದ್ದರಾಮಯ್ಯ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಮಾಧುಸ್ವಾಮಿ, ಧ್ವಜಕಾಯ್ದೆ ವಿರೋ ಪಕ್ಷದ ನಾಯಕರು ಉಲ್ಲೇಖಿಸಿದ್ದಾರೆ.

ಅದನ್ನು ಈಶ್ವರಪ್ಪ ಹೇಳಿಕೆ ನೀಡಿದ್ದಲ್ಲ. ವಿದ್ಯುನ್ಮಾನ ಮಾಧ್ಯಮದವರು ಕೇಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೀರಾ ಎಂದಾಗ 200-300 ವರ್ಷಗಳಲ್ಲಿ ರಾಷ್ಟ್ರಧ್ವಜ ಆಗಬಹುದು ಎಂದಷ್ಟೇ ಹೇಳಿದ್ದಾರೆ. ತ್ರಿವರ್ಣ ಧ್ವಜ ನಮ್ಮ ರಾಷ್ಟ್ರಧ್ವಜವಾಗಿದ್ದು, ಅದಕ್ಕೆ ಗೌರವ ಕೊಡುವುದಾಗಿ ಹೇಳಿದ್ದಾರೆ. ಎಲ್ಲಿಯೂ ಅಗೌರವ ತೋರಿಲ್ಲ ಎಂದರು.

See also  ಐಎಂಎ ವಂಚನೆ ಪ್ರಕರಣ: 11ಆರೋಪಿಗಳಿಗೆ ಜಾಮೀನು

ಈ ವೇಳೆ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ಪತ್ರಿಕೆಯಲ್ಲಿ ಬಂದಿರುವುದೆಲ್ಲಾ ತಪ್ಪೇ ಎಂದು ಪ್ರಶ್ನಿಸಿದರು. ಆಗ ಮತ್ತೆ ಎರಡು ಪಕ್ಷದವರ ನಡುವೆ ವಾಗ್ವಾದ ಏರ್ಪಟ್ಟು ಒಂದು ಹಂತದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹಿಜಾಬ್‍ನಿಂದ ಹೈರಾಣಾಗಿದ್ದಾರೆ ಎಂದು ಹೇಳಿದಾಗ ಮತ್ತೆ ಕಾಂಗ್ರೆಸಿಗರು ಮಾತನಾಡಲು ಮುಂದಾದರು. ಈ ವೇಳೆ ಸದನದಲ್ಲಿ ಕೋಲಾಹಲ ಉಂಟಾಯಿತು.

ಈಶ್ವರಪ್ಪ ಅವರಿಗೆ ಮಾತನಾಡಲು ಅವಕಾಶ ನೀಡದಾಗ ಅದಕ್ಕೂ ಮುನ್ನ ತಮಗೆ ಮಾತನಾಡಲು ಅವಕಾಶ ನೀಡಬೇಕೆಂದು ಸಿದ್ದರಾಮಯ್ಯ ಹೇಳಿದರು. ಆಗ ಮತ್ತೆ ಮಾತಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಗದ್ದಲ ವಿಪರೀತವಾದಾಗ ಸಭಾಧ್ಯಕ್ಷರು ಸದನದಲ್ಲಿದ್ದ ಎಲ್ಲಾ ಮೈಕ್‍ಗಳನ್ನು ಸ್ವಿಚ್ ಆಫ್ ಮಾಡುವಂತೆ ಸೂಚಿಸಿದರು.

ಬಳಿಕ ಸಿದ್ದರಾಮಯ್ಯ ನಂತರವೇ ಈಶ್ವರಪ್ಪ ಅವರಿಗೆ ಮಾತನಾಡಲು ಅವಕಾಶ ಕೊಡುವುದಾಗಿ ಹೇಳಿ ಸಿದ್ದರಾಮಯ್ಯ ಮಾತನಾಡುವಂತೆ ಸೂಚಿಸಿದರು. ಈ ಹಂತದಲ್ಲೂ ಮತ್ತೆ ವಾಗ್ವಾದ ತಾರಕಕ್ಕೇರಿದಾಗ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು