ಬೆಂಗಳೂರು: ಪಕ್ಷದೊಳಗಿನ ನಾಯಕತ್ವ ಬಿಕ್ಕಟ್ಟನ್ನು ಮರೆ ಮಾಚಿ ಹುಸಿ ಒಗ್ಗಟ್ಟನ್ನು ಪ್ರದರ್ಶಿಸಲು ಕಾಂಗ್ರೆಸ್ ನಾಯಕರು ಸದನವನ್ನು ದುರುಪಯೋಗ ಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ದ್ವಜ ಹಾರಿಸಲು ಪ್ರಯತ್ನಿಸಿದ ನಾಗರಿಕರನ್ನು ಗುಂಡಿಟ್ಟು ಕೊಂದ ಇತಿಹಾಸ ಹೊಂದಿರುವ ಕಾಂಗ್ರೆಸ್ ನಾಯಕರು ಅದೇ ರಾಷ್ಟ್ರ ಧ್ವಜವನ್ನು, ಧ್ವಜ ಸಂಹಿತೆಗೆ ವಿರುದ್ಧವಾಗಿ ಸದನದಲ್ಲಿ ಪ್ರದರ್ಶಿಸಿದ್ದಾರೆ. ರಾಷ್ಟ್ರ ಧ್ವಜವನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಂಡಿರುವುದು ಆ ಪಕ್ಷದ ದುರ್ಬಲ ಸ್ಥಿತಿಯನ್ನು ಪ್ರತಿಫಲಿಸುತ್ತದೆ ಎಂದರು.
ಗೌರವಾನ್ವಿತ ರಾಜ್ಯಪಾಲರು, ಜಂಟಿ ಸದನವನ್ನುದ್ದೇಶಿಸಿ ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ಸಾಂವಿಧಾನಿಕ ಕರ್ತವ್ಯ ನಿರ್ವಹಣೆ, ಜನರ ಕುಂದು ಕೊರತೆಗಳ ನಿವಾರಣೆಗೆ ಬೆಳಕು ಚೆಲ್ಲುವಂತಹ ವೇದಿಕೆಯನ್ನು ರಾಜಕೀಯ ಅಂಗಳವನ್ನಾಗಿ ಮಾಡುತ್ತಿರುವುದು ವಿಷಾದನೀಯ ಎಂದ ಅವರು, ಸಚಿವ ಕೆ.ಎಸ್. ಈಶ್ವರಪ್ಪ ಅವರಂಥ ಅಪ್ಪಟ ರಾಷ್ಟ್ರ ಪ್ರೇಮಿ ಹಾಗೂ ನಾಯಕರನ್ನು ಗುರಿಯಾಗಿಟ್ಟುಕೊಂಡು ಕೆಸರೆರುಚುವ ವ್ಯರ್ಥ ಪ್ರಯತ್ನ ಬಿಟ್ಟು, ಕಾಂಗ್ರೆಸ್ ಶಾಸಕರು ಸದನದ ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸಚಿವ ಆರಗ ಜ್ಞಾನೇಂದ್ರ ವಿನಂತಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಆರಗ ಜ್ಞಾನೇಂದ್ರ, ಹಿಜಾಬ್ ವಿಷಯವನ್ನು ಕೆಲವು ಮತೀಯ ಸಂಘಟನೆಗಳು, ಸಮಾಜ ಒಡೆಯುವ ಅಸ್ತ್ರವನ್ನಾಗಿ, ಮಾಡಿಕೊಳ್ಳುವುದನ್ನು ಸಹಿಸುವುದಿಲ್ಲ. ಇದರ ಹಿಂದಿರುವ ಷಡ್ಯಂತ್ರವನ್ನು ಪೊಲೀಸರು ಬಯಲುಗೊಳಿಸುತ್ತಾರೆ ಹಾಗೂ ತಕ್ಕ ಕಾನೂನು ಕ್ರಮ ಆಗುತ್ತದೆ ಎಂದು ತಿಳಿಸಿದರು.