ಬೆಂಗಳೂರು: ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿದ್ದ ಆರೋಪದಡಿ ಕಾನ್ಸ್ಟೆಬಲ್ ಪವನ್ ದ್ಯಾವಣ್ಣನವರ್ ಅವರನ್ನು ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿ ಪವನ್, ಗೋವಿಂದರಾಜನಗರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ. ಈತ ಎಸಗಿದ್ದ ಕೃತ್ಯದ ಬಗ್ಗೆ ಬಾಲಕಿ ಹೇಳಿಕೆ ನೀಡಿದ್ದಾಳೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನು ಬಂಧಿಸಲಾಗಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಡ್ರಾಪ್ ನೆಪದಲ್ಲಿ ಪರಿಚಯ: ‘ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಪೋಷಕರ ಜೊತೆ ವಾಸವಿದ್ದ ಬಾಲಕಿ, ಚಾಮರಾಜನಗರದ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಆತನನ್ನೇ ಮದುವೆಯಾಗಲೆಂದು ಜುಲೈ 26ರಂದು ಮನೆ ಬಿಟ್ಟು ಚಾಮರಾಜನಗರಕ್ಕೆ ಹೊರಟಿದ್ದಳು. ಮನೆಯಿಂದ ಬಾಲಕಿ ನಾಪತ್ತೆಯಾದ ಬಗ್ಗೆ ಪೋಷಕರು ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ತನ್ನ ಮನೆಯಿಂದ ವಿಜಯನಗರಕ್ಕೆ ಹೋಗಿದ್ದ ಬಾಲಕಿ, ಉದ್ಯಾನ ಬಳಿಯ ರಸ್ತೆಯಲ್ಲಿ ಓಡಾಡುತ್ತಿದ್ದಳು. ಮಫ್ತಿಯಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್ಟೆಬಲ್ ಪವನ್, ಬಾಲಕಿಯನ್ನು ಮಾತನಾಡಿಸಿದ್ದ. ಆಕೆ ಯುವಕನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದುಕೊಂಡಿದ್ದ. ಯುವಕನ ಮನೆ ಇರುವ ಚಾಮರಾಜನಗರಕ್ಕೆ ಹೋಗಲು ನಿಲ್ದಾಣಕ್ಕೆ ಡ್ರಾಪ್ ಕೊಡುವುದಾಗಿ ಹೇಳಿ ಬೈಕ್ನಲ್ಲಿ ಹತ್ತಿಸಿಕೊಂಡು ಅಲ್ಲಿಂದ ಹೊರಟಿದ್ದ.’
‘ಮಾರ್ಗಮಧ್ಯೆ ಬಾಲಕಿಯನ್ನು ಪುಸಲಾಯಿಸಿದ್ದ ಕಾನ್ಸ್ಟೆಬಲ್, ‘ಈಗ ಸಂಜೆ ಆಗಿದೆ. ಚಾಮರಾಜನಗರಕ್ಕೆ ಹೋಗುವಷ್ಟರಲ್ಲಿ ರಾತ್ರಿ ಆಗುತ್ತದೆ. ಬೆಳಿಗ್ಗೆ ನಿಲ್ದಾಣಕ್ಕೆ ಬಿಡುತ್ತೇನೆ. ಇಂದು ರಾತ್ರಿ ಕೊಠಡಿಯಲ್ಲಿ ಇರು’ ಎಂದಿದ್ದ. ಅದನ್ನು ನಂಬಿದ್ದ ಬಾಲಕಿ, ಆತನ ಕೊಠಡಿಯಲ್ಲಿ ಉಳಿದುಕೊಂಡಿದ್ದಳು’ ಎಂದು ಮೂಲಗಳು ಹೇಳಿವೆ.
ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ. ಜುಲೈ 27ರಂದು ಬೆಳಿಗ್ಗೆ ಬಾಲಕಿಯನ್ನು ನಿಲ್ದಾಣಕ್ಕೆ ಕರೆದೊಯ್ದು ಹಣ ನೀಡಿ ಚಾಮರಾಜನಗರ ಬಸ್ ಹತ್ತಿಸಿ ಕಳುಹಿಸಿದ್ದ’ ಎಂದು ತಿಳಿಸಿವೆ.