ಬೆಂಗಳೂರು: ಹೃದಯಾಘಾತದಿಂದ ಮೃತಪಟ್ಟ ಸಚಿವ ಉಮೇಶ್ ಕತ್ತಿ ಉತ್ತಮ ಸ್ನೇಹಿತ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ಮಾತನಾಡಿದ ಅವರು, ಉಮೇಶ್ ಕತ್ತಿ ಅವರ ತಂದೆಯೂ ಹೃದಯಾಘಾತದಿಂದ ನಿಧನರಾಗಿದ್ದರು. ಬಳಿಕ ಉಪ ಚುನಾವಣಾಯಲ್ಲಿ ಜನತಾ ಪಕ್ಷದಿಂದ ಉಮೇಶ್ ಕತ್ತಿ ಗೆದ್ದಿದ್ದರು. ಅವರು ಮೂಲತಃ ರಾಮಕೃಷ್ಣ ಹೆಗ್ಡೆ ಅವರ ಜೊತೆಗಿದ್ದವರು. ನಂತರದಲ್ಲಿ ಜೆ.ಎಚ್. ಪಟೇಲ್ ಜೊತೆಗೂ ಚೆನ್ನಾಗಿದ್ದರು. ಅವರಿಗೆ ಬೈಪಾಸ್ ಸರ್ಜರಿ ಆಗಿತ್ತು. ಆರೋಗ್ಯದ ಬಗ್ಗೆ ಅಷ್ಟೊಂದು ನಿಗಾ ವಹಿಸಿಲ್ಲ ಎಂದು ಅನ್ನಿಸುತ್ತದೆ ಅಂತಾ ಸಿದ್ದರಾಮಯ್ಯ ಹೇಳಿದರು.
ಉಮೇಶ್ ಕತ್ತಿ ತನ್ನ ಉತ್ತಮ ಸ್ನೇಹಿತ, ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ. ಭಾರತ್ ಜೋಡೋ ಯಾತ್ರೆ ಆರಂಭದ ಹಿನ್ನೆಲೆಯಲ್ಲಿ ನಾನು ಇವತ್ತು ಕನ್ಯಾಕುಮಾರಿ ಹೋಗಬೇಕಿತ್ತು. ಆದರೆ, ಉಮೇಶ್ ಕತ್ತಿ ಅವರ ಅಂತಿಮ ದರ್ಶನಕ್ಕೆ ತೆರಳುತ್ತಿರುವುದರಿಂದ ಕನ್ಯಾಕುಮಾರಿಗೆ ತೆರಳುತ್ತಿಲ್ಲ ಎಂದು ತಿಳಿಸಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಾದ ಉಮೇಶ್ ಕತ್ತಿ ಅವರ ನಿಧನದಿಂದ ತೀವ್ರ ದುಃಖಿತನಾಗಿದ್ದೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಕುಟುಂಬವರ್ಗಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.