ಬೆಂಗಳೂರು: ಕುಂಬಾರ ಸಂಘದ ಆಡಳಿತ ಮಂಡಳಿಯಲ್ಲಿ ನಡೆದ ಅವ್ಯವಹಾರದ ಬಗ್ಗೆ ಹೋರಾಟ ಮಾಡುತ್ತಿರುವ ಬಿ.ಎಸ್. ಬದ್ರಿ ಪ್ರಸಾದ್ ಎಂಬುವರ ಮೇಲೆ ಕುಂಬಾರ ಸಂಘದ ಕೆಲವು ಆಡಳಿತ ಮಂಡಳಿಯ ಪಟ್ಟಭದ್ರರು ಎರಡು ಬಾರಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಜರುಗಿಸಬೇಕು. 48 ಗಂಟೆಗಳಲ್ಲಿ ಹಲ್ಲೆಕೋರರ ಬಂಧನವಾಗದಿದ್ದರೆ ಕಲಾಸಿ ಪಾಳ್ಯ ಪೊಲೀಸ್ ಠಾಣೆ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಹಲ್ಲೆಗೊಳ್ಳಗಾದ ಹಾಗೂ ನೋಂದವರ ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಕುಂಬಾರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್, ಕಲಾಸಿಪಾಳ್ಯದಲ್ಲಿರುವ ಕುಂಬಾರ ಸಂಘದ ಹಿಂದಿನ ಆಡಳಿತ ಮಂಡಳಿಯಲ್ಲಿ ಕೇವಲ 15 ದಿನಗಳಲ್ಲಿ ಸುಮಾರು 98 ಕೋಟಿ ರೂ ಅಕ್ರಮ ನಡೆದಿತ್ತು. ಸಭೆ ನಡೆಸದೇ ಬೈಲಾ ನಿಯಮಗಳನ್ನು ಉಲ್ಲಂಘಿಸಿ ಹಣವನ್ನು ಡ್ರಾ ಮಾಡಿಕೊಂಡಿರುವ ದಾಖಲೆಗಳನ್ನು ಸಹಕಾರ ಸಂಘಗಳ ಸಹಾಯಕ ನಿಬಂಧಕರು ವಲಯ -2 ಇಲ್ಲಿಗೆ ಬದ್ರಿ ಪ್ರಸಾದ್ ದಾಖಲೆ ಸಮೇತ ದೂರು ಸಲ್ಲಿಸಿದ್ದರು.
ಈ ಕುರಿತು ಸಹಕಾರ ಸಂಘ ನೋಟೀಸ್ ಜಾರಿ ಮಾಡಿತ್ತು. ಇದಕ್ಕೆ ಸಂಬಂಧಟ್ಟ ದಾಖಲೆಗಳನ್ನು ಒದಗಿಸಲು ಇದೇ ತಿಂಗಳ 17 ರಂದು ಸಂಜೆ 6.30 ಕ್ಕೆ ಸಂಘದ ಕಚೇರಿಗೆ ಆಗಮಿಸಿದ್ದಾಗ 20 ರಿಂದ 25 ಮಂದಿ ಏಕಾಏಕಿ ಹಲ್ಲೆ ಮಾಡಿ ಚಾಕುವಿನಿಂದ ಮನಸೋ ಇಚ್ಚೆ ಇರಿದು. ಪ್ರಜ್ಞೆ ತಪ್ಪಿಸಿದ್ದರು. ಬದ್ರಿ ಪ್ರಸಾದ್ ಅವರ ರಕ್ಷಣೆಗೆ ಬಂದ ಚಂದ್ರ ಶೇಖರ್ ಅವರ ಮೇಲೂ ಹೆಲ್ಮೆಟ್ ನಿಂದ ಹಲ್ಲೆ ಮಾಡಿ ಅವರನ್ನು ಹೊರ ದಬ್ಬಿದ್ದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬದ್ರಿ ಪ್ರಸಾದ್ ಅವರನ್ನು ಸ್ವತಃ ಕಲಾಸಿ ಪಾಳ್ಯ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಈ ಬಗ್ಗೆ ಎಫ್.ಐ.ಆರ್ ದಾಖಲಾಗಿದ್ದರೂ ಸಹ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಕಳೆದ ತಿಂಗಳ 10 ರಂದು ಮಲ್ಲೇಶ್ವರದಲ್ಲಿ ಬದ್ರಿ ಪ್ರಸಾದ್ ಅವರ ಮೇಲೆ ಕುಂಬಾರರ ಸಂಘದ ಹಾಲಿ ಅಡಳಿತ ಮಂಡಳಿಯ ನಿರ್ದೇಶಕರಾದ ಎಸ್ ಗೋವಿಂದ್, ಆರ್.ಶ್ರೀನಿವಾಸ್, ಸಿ, ಗಿರೀಶ್, ಪಿ. ಮುನಿರಾಜು (ಬಾಬು) ಮತ್ತಿತರರು ಮಲ್ಲೇಶ್ವರದಲ್ಲಿ ಹಲ್ಲೆ ನಡೆಸಿ ರಕ್ತ ಗಾಯ ಮಾಡಿದ್ದರು. ಈ ಬಗ್ಗೆಯೂ ದೂರು ದಾಖಲಾಗಿತ್ತು. ಪೊಲೀಸರು ಕ್ರಮ ಜರುಗಿಸದ ಕಾರಣ ಇದೇ ವ್ಯಕ್ತಿಗಳು ಮತ್ತೊಮ್ಮೆ ಹಲ್ಲೆ ಮಾಡಿದ್ದಾರೆ. ಇದರಿಂದ ಕುಂಬಾರ ಸಂಘ ಮತ್ತು ಸಮುದಾಯಕ್ಕೆ ತುಂಬಾ ನೋವಾಗಿದೆ ಎಂದರು.
ಬಿ.ಎಸ್. ಬದ್ರಿ ಪ್ರಸಾದ್ ಅವರು ಕುಂಬಾರ ಸಂಘದ ಸಂಸ್ಥಾಪಕರಾದ ಬಿ.ವಿ. ಗವಿ ಸಿದ್ಧಪ್ಪ ಅವರ ಮಗನಾಗಿದ್ದು, ಸಂಘದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಸಹಿಸದೇ ದಿಟ್ಟತನದಿಂದ ಹೋರಾಟ ಮಾಡುತ್ತಿದ್ದಾರೆ. ಸಹಕಾರ ಸಂಘದ ನೋಟಿಸ್ ಗೆ ಉತ್ತರ ನೀಡುವ ಸಲುವಾಗಿ ದಾಖಲೆಗಳನ್ನು ತರುವಂತೆ ಬದ್ರಿ ಪ್ರಸಾದ್ ಅವರಿಗೆ ಸೂಚಿಸಲಾಗಿತ್ತು. ಸಂಘದ ಕಚೇರಿಗೆ ಆಗಮಿಸಿದಾಗ ಇವರೆಲ್ಲರೂ ಸೇರಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಸಂಘದ ಹಾಲಿ ಅಧ್ಯಕ್ಷ ಎಲ್. ಶ್ರೀನಿವಾಸ್ ಆರೋಪಿಸಿದ್ದಾರೆ.