ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಆಶಾಕಿರಣವಾಗಿದ್ದು, ಇಲ್ಲಿನ ವಿದ್ಯಾರ್ಥಿಗಳು ಉನ್ನತ ಅಧಿಕಾರಿಗಳಾಗಿ ಆಯ್ಕೆಯಾಗುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಪ್ರಾದೇಶಿಕ ಆಯುಕ್ತರ ಕಛೇರಿಯ ಹೆಚ್ಚುವರಿ ಆಯುಕ್ತ ಡಾ. ಪಿ. ಶಿವರಾಜು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಡಿ.ಆರ್, ಎ.ಆರ್, ಸೂಪರಿಂಟೆಂಡೆಂಟ್, ಎಫ್ಡಿಎ, ಎಸ್ಡಿಎ ನೌಕರರುಗಳಿಗೆ ಏರ್ಪಡಿಸಿದ್ದ 4 ದಿನಗಳ ಆಡಳಿತಾತ್ಮಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಎ+ ಶ್ರೇಣಿ ಪಡೆದಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು, ಕರ್ನಾಟಕ ರಾಜ್ಯದ ಅತ್ಯುತ್ತಮ ವಿವಿಯಾಗಿದೆ. ನಾನು ಸಹ ಇದೇ ವಿಶ್ವವಿದ್ಯಾನಿಲಯದಿಂದ ಪದವಿ, ಸ್ನಾತಕೋತ್ತರ ಪದವಿ ಗಳಿಸಿದ್ದು ಕೆಎಎಸ್ ಪರೀಕ್ಷೆ ಪಾಸು ಮಾಡುವಲ್ಲಿ ಈ ವಿಶ್ವವಿದ್ಯಾನಿಲಯದ ಕೊಡುಗೆ ಅಪಾರವಾಗಿದೆ ಎಂದರು.
ಲಕ್ಷಾಂತರ ಜನರ ಉದ್ಯೋಗಿಕ ಮತ್ತು ವೈಯಕ್ತಿಕ ಏಳಿಗೆಯಲ್ಲಿ ಕರಾಮುವಿ ಪಾತ್ರ ಅನನ್ಯವಾಗಿದೆ. ಈ ವಿಶ್ವವಿದ್ಯಾನಿಲಯದ ಉದ್ಯೋಗಿಗಳು ಕಛೇರಿ ಕಡತಗಳನ್ನು ತ್ವರಿತ ವಿಲೇವಾರಿ ಮಾಡಲು ಸಹಾಯವಾಗುವ ಈ ತರಬೇತಿಯನ್ನು ಪಡೆದುಕೊಳ್ಳಬೇಕು ಹಾಗೂ ಸಿಬ್ಬಂದಿವರ್ಗದವರಿಗೆ ಅಗತ್ಯ ಜ್ಞಾನ ಕೌಶಲ್ಯ ಲಭಿಸುವಂತಾಗಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಕರಾಮುವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರು ಮಾತನಾಡಿ, ಹೊಸತನಕ್ಕೆ ಹೊಂದಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಇಂದು ಸ್ಪರ್ಧಾತ್ಮಕ ಯುಗ. ಕಾನೂನು ಚೌಕಟ್ಟು ಬೇರೆ, ಕಾಲ ಕಾಲಕ್ಕೆ ಆಡಳಿತದಲ್ಲಿ ಬದಲಾವಣೆ ಇರುತ್ತದೆ. ಕೆಲಸಕ್ಕೆಂದು ಬರುವ ಯಾವುದೇ ಸಾರ್ವಜನಿಕರನ್ನು ಕಾಯಿಸದೆ ತ್ವರಿತವಾಗಿ ಕಡತ ವಿಲೇವಾರಿ ಮಾಡಲು ಈ ತರಬೇತಿ ಸಹಕಾರಿಯಾಗಲಿ ಎಂದು ಶುಭಕೋರಿದರು.
ಕುಲಸಚಿವ ಪ್ರೊ.ಕೆ.ಎಲ್.ಎನ್ ಮೂರ್ತಿ, ಹಣಕಾಸು ಅಧಿಕಾರಿ ಡಾ. ಎ. ಖಾದರ್ಪಾಷ ತರಬೇತಿ ಕುರಿತು ವಿವರಣೆ ನೀಡಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ. ವಿ. ರಂಗನಾಥ್, ಕೆ.ಎಲ್. ಪ್ರಕಾಶ್, ಮಧುಸೂದನ್, ಡೀನ್ಗಳಾದ ಪ್ರೊ. ಎನ್.ಲಕ್ಷ್ಮಿ, ಪ್ರೊ. ರಮಾನಾಥಂನಾಯ್ಡ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ.ಬಿ. ಪ್ರವೀಣ, ಇ-ಗವರ್ನೆನ್ಸ್ ಪ್ರೊ. ಮಹದೇವಮೂರ್ತಿ, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಜೈನಹಳ್ಳಿ ಸತ್ಯನಾರಾಯಣಗೌಡ ಉಪಸ್ಥಿತರಿದ್ದರು.