ಬೆಂಗಳೂರು: ವಿಧಾನ ಸಭೆ ಚುನಾವಣೆಗಳಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದೆ. ಬಿಜೆಪಿಯಲ್ಲಿ ಈಗ ಆತ್ಮವಿಮರ್ಶೆ ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆಗಳಿಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಕಾರಣ ಎಂದು ಹೇಳಲಾಗುತ್ತಿದೆ.
224 ಸದಸ್ಯ ಬಲದಲ್ಲಿ ಬಿಜೆಪಿ ಕೇವಲ ಕೇವಲ 65 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಇದಕ್ಕೆ ಕಾರಣವಾಗಿದ್ದು ಪಕ್ಷವು ಹೊಸಬರಿಗೆ ಮಣೆ ಹಾಕಿ, ಹಳೆಯ ಪ್ರಭಾವಿ ನಾಯಕರನ್ನು ಕೈಬಿಟ್ಟಿರುವುದು ಕೇಸರಿ ಪಕ್ಷದ ಹೀನಾಯ ಸೋಲಿಗೆ ಕಾರಣ ಎನ್ನಲಾಗುತ್ತಿದೆ.
ಫಲಿಸದ ಗುಜರಾತ್ ಸೂತ್ರ: ಕಳೆದ ವರ್ಷದ ಗುಜರಾತ್ ಚುನಾವಣೆಯಲ್ಲಿ ಹೆಚ್ಚು ಹೊಸಬರಿಗೆ ಮಣೆ ಹಾಕಲು ಬಿಜೆಪಿ ನಿರ್ಧರಿಸಿತ್ತು. ಆ ಪ್ರಯೋಗದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಕಂಡಿತು. ಅದೇ ಪ್ರಯೋಗವನ್ನು ಕರ್ನಾಟಕದಲ್ಲಿ ಪ್ರಯೋಗಿಸಲು ಬಿಎಲ್ ಸಂತೋಷ್ ಮುಂದಾದರು. ಹಳಬರಿಗೆ ಮಣೆ ಹಾಕದೆ ತಮ್ಮ ನಿಷ್ಠರಿಗೆ ಮಣೆ ಹಾಕಲು ನೋಡಿದರು. ಆದರೆ ಕರ್ನಾಟಕದ ಮತದಾರರ ಅದಕ್ಕೆ ಕಿಂಚಿತ್ತು ಮನ್ನಣೆ ನೀಡಿಲ್ಲ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ.
ಘಟಾನುಘಟಿಗಳಿಗೆ ಟಿಕೆಟ್ ನಿರಾಕರಣೆ: ಪಕ್ಷದ ಪ್ರಮುಖ ನಾಯಕರಾದ ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿ ಹೊಸಬರಿಗೆ ಮಣೆ ಹಾಕಲಾಯಿತು. ಇದು ಬಿಜೆಪಿಯಲ್ಲಿ ಚುನಾವಣೆ ಮೊದಲೇ ಕಲ್ಲೋಲವನ್ನೇ ಸೃಷ್ಟಿಸಿತು. ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ತೊರೆದರು. ಶೆಟ್ಟರ್ ಚುನಾವಣೆಯಲ್ಲಿ ಸೋತರೂ ಸಹಿತ ಅವರನ್ನು ಬಿಜೆಪಿ ನಡೆಸಿಕೊಂಡ ರೀತಿಗೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ಅಸಮಾಧಾನ ಭುಗಿಲೆದ್ದಿತು. ಅದೇ ರೀತಿ ಲಕ್ಷ್ಮಣ ಸವದಿ ಅವರು ಬಿಜೆಪಿಯಿಂದ ಹೊರ ನಡೆದು ಕಾಂಗ್ರೆಸ್ ಸೇರ್ಪಡೆಗೊಂಡರು. ಅವರು ಅಥಣಿಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿದರು. ಅಥಣಿ ಪಕ್ಕದ ಎರಡು ತಾಲ್ಲೂಕುಗಳಲ್ಲಿ ಸವದಿ ಅವರು ಪ್ರಭಾವ ಬೀರಿದರು. ಸಂತೋಷ್ ಅವರ ನಡೆ ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯದಲ್ಲಿ ಆಕ್ರೋಶವನ್ನು ಹುಟ್ಟುಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಯಡಿಯೂರಪ್ಪಗೆ ಕಣ್ಣೀರಿನ ವಿದಾಯ, ಲಿಂಗಾಯತರ ಆಕ್ರೋಶ: ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೈಬಿಟ್ಟಿರುವುದರ ಹಿಂದೆ ಬಿಎಲ್ ಸಂತೋಷ್ ಇದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಓಡಾಡುತ್ತಿವೆ. ಇದೂ ಸಹಿತ ಲಿಂಗಾಯತ ಸಮುದಾಯಲ್ಲಿ ಆಕ್ರೋಶವನ್ನು ಹುಟ್ಟುಹಾಕಿತು. ಇದೆಲ್ಲವೂ ಸೇರಿ ಬಿಜೆಪಿ ಹಿನ್ನೆಡೆಗೆ ಕಾರಣವಾಯಿತು. ಬಿಜೆಪಿ ಸೋತ ಬಳಿಕ ಬಿಎಲ್ ಸಂತೋಷ್ ಅವರ ಕಡೆಗೆ ಎಲ್ಲರ ಕಣ್ಣು ಹೊರಳಿವೆ.