ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ನೇತೃತ್ವದ ನೂತನ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಐದು ಗ್ಯಾರಂಟಿಗಳ ಘೋಷಣೆಯಾಗಿದೆ. ಅದರಲ್ಲಿ ೨೦೦ ಯೂನಿಟ್ ತನಕ ಉಚಿತ ವಿದ್ಯುತ್ ಕೂಡ ಒಂದು. ಈ ಘೋಷಣೆಯನ್ನು ಸರಕಾರ ಇನ್ನೂ ಅಧಿಕೃತವಾಗಿ ಜಾರಿಗೊಳಿಸಿಲ್ಲ. ಈ ಬೆನ್ನಲ್ಲೇ ದುಬಾರಿ ಎಲ್ಪಿಜಿ ಸಿಲಿಂಡರ್ ಗೆ ಗುಡ್ ಬೈ ಹೇಳುತ್ತಿರುವ ಹಳ್ಳಿ ಜನರು ಇದೀಗ ವಿದ್ಯುತ್ ಒಲೆ ಖರೀದಿಗೆ ಮುಂದಾಗಿದ್ದಾರೆ.
1125 ರೂ. ಕೊಟ್ಟು ಗ್ಯಾಸ್ ಸಿಲಿಂಡರ್ ಖರೀದಿಸುವುದಕ್ಕಿಂತ ಉಚಿತ ವಿದ್ಯುತ್ ಸಿಕ್ಕರೆ ಅಡುಗೆ ವೆಚ್ಚ ಇಳಿಯಬಹುದು ಅನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ವಿಜಯ ನಗರ ಜಿಲ್ಲೆಯ ಹೂವಿನ ಹಡಗಲಿಯ ಜನ ವಿದ್ಯುತ್ ಒಲೆಗಳ ಮೊರೆ ಹೋಗಿದ್ದಾರೆ. ತಾತ್ವಿಕ ಒಪ್ಪಿಗೆ ಬೆನ್ನಲ್ಲೇ ಇಂತಹ ಬೆಳವಣಿಗೆ ನಡೆದಿರುವುದು ವಿಶೇಷ. ಮಹಿಳೆಯರು ಈಗ ವಿದ್ಯುತ್ ಒಲೆ ಖರೀದಿಸುತ್ತಿರುವುದರಿಂದ ವಿದ್ಯುತ್ ಒಲೆಯ ಮಾರಾಟದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡು ಬಂದಿದೆ ಎಂದು ತಿಳಿದು ಬಂದಿದೆ.