ಬೆಂಗಳೂರು: ಸಿದ್ದರಾಮಯ್ಯ ಅವರನ್ನು ಕರ್ನಾಟಕದ ಮುಖ್ಯಮಂತ್ರಿ ಎಂದು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಹಿರಿಯ ಮುಖಂಡ ಕೆ. ಸಿ ವೇಣುಗೋಪಾಲ್ ಅವರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ವಿವರ ನೀಡಿದರು.
ಕರ್ನಾಟಕ ಜನತೆ ಕಾಂಗ್ರೆಸ್ ಗೆ ನೀಡಿರುವ ಜನಾದೇಶಕ್ಕೆ ಹೃದಯ ತುಂಬಿದ ಧನ್ಯವಾದಗಳು. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಕಾಂಗ್ರೆಸ್ ಜಯಕ್ಕೆ ಕಾರಣವಾಯಿತು. ಪ್ರಿಯಾಂಕಾ ಗಾಂಧಿ ಅವರ ರೋಡ್ ಶೋ, ಸೋನಿಯಾಗಾಂಧಿ ಅವರ ಚುನಾವಣಾ ಪ್ರಚಾರ ಪಕ್ಷ ಬಹುಮತ ಪಡೆಯುವಲ್ಲಿ ಸಹಕಾರಿ ಆಯಿತು ಎಂದು ವಿವರಿಸಿದ್ದಾರೆ.
3 ವಿಕ್ಷಕರ ನೇಮಕ ಮಾಡಿ ಪ್ರತಿ ಎಂಎಲ್ಎಗಳಿಂದ ಅಭಿಪ್ರಾಯ ಪಡೆದು ಮುಖ್ಯಮಂತ್ರಿ ಆಯ್ಕೆ ನಡೆಸಿದ್ದೇವೆ. ನಮ್ಮ ಪಕ್ಷದಲ್ಲಿ ಸರ್ವಾಧಿಕಾರ ಇಲ್ಲ. ಈ ನಿಟ್ಟಿನಲ್ಲಿ ಎಲ್ಲರ ಅಭಿಪ್ರಾಯ ಪಡೆದು ಸಿದ್ದರಾಮಯ್ಯ ಅವರನ್ನು ಸಿಎಂ ಎಂದು ಘೋಷಿಸಿದ್ದೇವೆ. ಮೇ 20ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಡಿ.ಕೆ. ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಎಂದು ನಿರ್ಧರಿಸಲಾಗಿದೆ.
ಅದೇರೀತಿ ಲೋಕಸಭೆ ಚುನಾವಣೆ ವರೆಗೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದರು. ಸಿಎಂ ಪ್ರಮಾಣ ವಚನ ದಿನದಂದು ಹಲವರು ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ವಿವರಿಸಿದರು.