ಬೆಂಗಳೂರು : ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ವಿಧಾನಸಭಾ ಚುನಾವಣೆಗೆ ಶಾಂತಿಯುತ ಮತದಾನ ನಡೆದಿದ್ದು, ಶನಿವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಚುನಾವಣಾ ಅಖಾಡಕ್ಕಿಳಿದಿರುವ 2615 ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಮತದಾರರು ಬರೆದಿದ್ದು, ಶನಿವಾರ ಮಧ್ಯಾಹ್ನದ ವೇಳೆಗೆ ಕಣದಲ್ಲಿರುವ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಪ್ರಕಟವಾಗಲಿದೆ.
37,777 ಸ್ಥಳಗಳಲ್ಲಿ ಸ್ಥಾಪನೆಯಾಗಿದ್ದ 58,545 ಮತಗಟ್ಟೆಗಳಲ್ಲಿ ಮತದಾನವಾಗಿದೆ. ಕಳೆದೊಂದು ತಿಂಗಳಿನಿಂದ ನಡೆದ ವಾಕ್ಸಮರ, ಟೀಕೆ, ಪ್ರತ್ಯುತ್ತರ ಸೇರಿದಂತೆ ಜಿದ್ದಾಜಿದ್ದಿ ಪೈಪೋಟಿಗೆ ಬುಧವಾರ ತೆರೆಬಿದ್ದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಇನ್ನೆರಡು ದಿನ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಲಿದ್ದಾರೆ. ಇದಕ್ಕೆಲ್ಲ ಶನಿವಾರ ಮಧ್ಯಾಹ್ನದ ವೇಳೆಗೆ ಫಲಿತಾಂಶವೇ ಉತ್ತರ ಹೇಳಲಿದೆ.
ಸಮೀಕ್ಷೆಗಳ ಸಾಧಕ ಬಾಧಕದ ಚರ್ಚೆ
ಸುಮಾರು ಒಂದೂವರೆ ತಿಂಗಳಿಂದ ಚುನಾವಣಾ ಅಖಾಡದಲ್ಲಿ ಬಿಡುವಿಲ್ಲದೆ ದುಡಿದಿದ್ದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರು ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ತುಸು ನಿರಾಳರಾಗಿದ್ದಾರೆ. ಮತ ಎಣಿಕೆಗೆ ಎರಡು ದಿನ ಇರುವುದರಿಂದ ತುಸು ವಿಶ್ರಾಂತಿ ಪಡೆಯಲು ಹೆಚ್ಚಿನವರು ತೆರಳಿದ್ದಾರೆ. ಆದರೆ ಈ ನಿರಾಳತೆ ಹೊರಗೆ ಮಾತ್ರ. ಎಲ್ಲರಿಗೂ ಒಳಗೆ ಎದೆ ಡವಡವ ಎನ್ನುತ್ತಿದೆ.
ಕಾಂಗ್ರೆಸ್ ಜಾಲಿ ಮೂಡ್
ಮತದಾನ ಮುಗಿದ ಕೂಡಲೇ ಪುಂಖಾನುಪುಂಖವಾಗಿ ಪ್ರಕಟವಾದ ಸಮೀಕ್ಷೆಗಳೆಲ್ಲ ಕಾಂಗ್ರೆಸ್ ಅತಿ ದೊಡ್ಡ ಪಕ್ಷ, ಅತಂತ್ರ ಸ್ಥಿತಿ ಎಂದೆಲ್ಲ ಭವಿಷ್ಯ ನುಡಿದಿವೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲೇ ಬೇಕೆಂದು ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್ ನಾಯಕರಿಗೆ ಈ ಸಮೀಕ್ಷೆ ಪೂರ್ಣ ತೃಪ್ತಿ ಕೊಡದಿದ್ದರೂ ಖುಷಿ ಕೊಟ್ಟಿರುವುದಂತೂ ನಿಜ. ಹಾಗೆಂದು ಸಮೀಕ್ಷೆಯನ್ನು ಪೂರ್ತಿಯಾಗಿ ನಂಬಿ ಕೂರುವಂತಿಲ್ಲ. ಉಳಿದವರಿಗೆ ಹೋಲಿಸಿದರೆ ಸದ್ಯ ಕಾಂಗ್ರೆಸ್ ನಾಯಕರು ತುಸು ಜಾಲಿ ಮೂಡ್ನಲ್ಲಿದ್ದಾರೆ ಅಷ್ಟೆ.
ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಕಾಂಗ್ರೆಸ್ನಿಂದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಜೆಡಿಎಸ್ನಿಂದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊದಲಾದವರು ಭರ್ಜರಿ ಪ್ರಚಾರ ನಡೆಸಿದ್ದರು.
ಬಿಜೆಪಿ ಪಾಳಯದಲ್ಲಿ ಟೆನ್ಶನ್
ಬಿಜೆಪಿ ಪಾಳಯದಲ್ಲಿ ಮಾತ್ರ ವಿಪರೀತ ಟೆನ್ಶನ್ ಇದೆ. ಬಿಜೆಪಿ ಪಾಲಿಗೆ ಈ ಚುನಾವಣೆ ಕರ್ನಾಟಕದ ರಾಜಕೀಯ ಭವುಷ್ಯ ಮಾತ್ರ ಅಲ್ಲ, ಈ ವರ್ಷದಲ್ಲೇ ನಡೆಯಲಿರುವ ಇನ್ನುಳಿದ ಕೆಲವು ರಾಜ್ಯಗಳ ಚುನಾವಣೆ ಮತ್ತು ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೂ ದಿಕ್ಸೂಚಿ. ಃೀಗಾಗಿ ಮೋದಿ, ಯೋಗಿಯಿಂದ ಹಿಡಿದು ಬಿಜೆಪಿಯ ಅಗ್ರಗಣ್ಯ ನಾಯಕರೆಲ್ಲ ಈ ಸಲ ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ಮಾಡಿದ್ದಾರೆ. ಇದರ ಹೊರತಾಗಿಯೂ ಸರಳ ಬಹುಮತ ಪಡೆಯಲು ಸಾಧ್ಯವಾಗದಿದ್ದರೆ ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ಬಿಜೆಪಿ ನಾಯಕರು ಎರಡು ದಿನಗಳ ಬಿಡುವನ್ನು ಪೂರ್ತಿಯಾಗಿ ಎಂಜಾಯ್ ಮಾಡುವ ಮನಸ್ಥಿತಿಯಲ್ಲಿ ಇಲ್ಲ.
ಜೆಡಿಎಸ್ ಮತ್ತು ಇತರರ ಪಾಲಿಗೆ ಫಲಿತಾಂಶ ಮಹಾ ಅಚ್ಚರಿ ಉಂಟು ಮಾಡೀತು ಎಂಬ ನಿರೀಕ್ಷೆಯಿಲ್ಲ. ಇವರೆಲ್ಲ ಅತಂತ್ರವೇ ಸೃಷ್ಟಯಯಾಗಲಿ ಎಂದು ಹಾರೈಸುವವರು. ಅವರ ಕಿವಿಗೆ ಸಮೀಕ್ಷೆರ ಫಲಿತಾಂಶ ಇಂಪಾಗಿಯೇ ಕೇಳಿಸಿದೆ. ಶನಿವಾರದ ತನಕ ಈ ನಂಬಿಕೆಯಲ್ಲಿ ನಿರಾಳವಾಗಿರಬಹುದು.