ಬೆಂಗಳೂರು: ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಸರಕಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪಾಲ್ಗೊಂಡರು.
ಈ ವೇಳೆ ಮಾತನಾಡಿದ ಅವರು ರಾಜ್ಯ ಆಡಳಿತದಲ್ಲಿ ನಿಮ್ಮ ಸೇವೆಯ ತೂಕವೇ ಹೆಚ್ಚು. ನಿಮ್ಮ ಸೇವೆ ಅಮೂಲ್ಯ. ಆದರೆ ಕಳೆದ ಮೂರುವರೆ ವರ್ಷದ ಡಬಲ್ ಎಂಜಿನ್ ಸರಕಾರದ ಆಳ್ವಿಕೆಯಲ್ಲಿ ಉತ್ತಮ ಆಡಳಿತ ಎಂಬುದು ಮಾಯವಾಗಿ, ಭ್ರಷ್ಟಾಚಾರದ ರಾಜಧಾನಿ ಎಂಬ ಕಳಂಕ ಬಂದಿದೆ. ದೇಶ ಮಾತ್ರವಲ್ಲ. ಇಡೀ ಜಗತ್ತು ಬೆಂಗಳೂರು ಮೂಲಕ ಭಾರತವನ್ನು ನೋಡುತ್ತಿದೆ. ಅನ್ಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಸಂಪನ್ಮೂಲ, ಪ್ರತಿಭೆ, ಆಳ್ವಿಕೆ ಮಾದರಿ ಆದದ್ದು. ದೇವರಾಜ ಅರಸು, ವೀರೇಂದ್ರ ಪಾಟೀಲರ ಕಾಲದಿಂದ ಸಿದ್ದರಾಮಯ್ಯನವರ ಸರಕಾರದ ಅವಧಿವರೆಗೂ ಕರ್ನಾಟಕದ ಆಡಳಿತ ಯಾರೊಬ್ಬರೂ ಬೆರಳು ತೋರಿಸದಷ್ಟು ಉತ್ತಮವಾಗಿತ್ತು.
ರಾಜಕೀಯ ದ್ವೇಷದಿಂದ ನನ್ನ ಮೇಲೆ ಸಿಬಿಐ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಪ್ರಯೋಗ ಮಾಡಲಾಗಿದೆ. ಚುನಾವಣೆ ಸಮಯದವರೆಗೂ ಈ ಕಾಟ ತಪ್ಪಲಿಲ್ಲ. ಆದರೆ ಜನ ನಮ್ಮ ಪರ ನಿಂತಿದ್ದಾರೆ ಎಂದರು. ಡಬಲ್ ಇಂಜಿನ್ ಸರಕಾರ ಇದ್ದರೂ, 26 ಬಿಜೆಪಿ ಎಂಪಿಗಳು ಇದ್ದರೂ, ರಾಜ್ಯದವರೇ ಕೇಂದ್ರದಲ್ಲಿ ಹಣಕಾಸು ಸಚಿವರಾಗಿದ್ದರೂ ನಮಗೆ ಅನ್ಯಾಯವಾಗಿದೆ. ಆಡಳಿತ ವಿಫಲವಾಗಿದೆ. ಕೇಂದ್ರ ಸರಕಾರ ಏನೆಲ್ಲ ಪ್ರಯೋಗ ಮಾಡಿದರೂ ಜನ ನಮ್ಮ ಮೇಲೆ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ಇದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಾವು ಉತ್ತಮ ಆಡಳಿತ, ಸರಕಾರ ನೀಡಲು ಬದ್ಧರಾಗಿದ್ದೇವೆ. ಅದರಲ್ಲಿ ನಿಮ್ಮ ಪಾಲೂ ಇದೆ. ರಾಜ್ಯಕ್ಕೆ ಅಂಟಿರುವ ಕಳಂಕವನ್ನು ತೊಳೆದು ಹಾಕಲು ನೀವು ನಮ್ಮ ಜತೆ ಕೈ ಜೋಡಿಸಬೇಕು. ರಾಜ್ಯದಲ್ಲಿ ಬದಲಾವಣೆ ಕಾಣುವಂತಹ ಆಳ್ವಿಕೆ ನೀಡಬೇಕು. ನಿಮ್ಮಿಂದ ಪಾಸಿಟಿವ್ ಸಂದೇಶ ತಾಲೂಕು, ಗ್ರಾಮ ಮಟ್ಟದವರೆಗೂ ಹೋಗಬೇಕು ಎಂದು ಹೇಳಿದರು.