News Karnataka Kannada
Friday, March 29 2024
Cricket
ಬೆಂಗಳೂರು ನಗರ

ಯುವನಿಧಿ ಗ್ಯಾರಂಟಿ ಆದೇಶ ಜಾರಿ : ನಿರುದ್ಯೋಗಿಗಳಿಗೆ ನಿರಾಶೆ

Youth Fund Guarantee Order Implemented: Unemployed Disappointed
Photo Credit : Twitter

ಬೆಂಗಳೂರು: ಚುನಾವಣೆ ಸಂದರ್ಭ ಉಚಿತ ಭಾಗ್ಯಗಳನ್ನು ಘೋಷಿಸಿ ಪ್ರಚಾರ ಸಭೆಗಳಲ್ಲಿ ಎಲ್ಲರಿಗೂ ಈ ಉಚಿತ ಸೌಲಭ್ಯಗಳು ಸಿಗಲಿವೆ ಎಂದು ಗಂಟಾಘೋಷವಾಗಿ ಸಾರಿದ್ದ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತಿದ್ದಂತೆ ವರಸೆ ಬದಲಿಸಿದೆ. ಕಾಂಗ್ರೆಸ್‌ ಕೊಟ್ಟಿರುವ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಮತ್ತು ಡಿಪ್ಲೊಮ ಪದವೀಧರರಿಗೆ 1,500 ರೂ. ಮಾಸಿಕ ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಕುರಿತಾದ ಆದೇಶ ಶನಿವಾರ ಹೊರಡಿಸಲಾಗಿದೆ. ಆದರೆ ಈ ಆದೇಶದಲ್ಲಿರುವ ಷರತ್ತು ನೋಡಿ ನಿರುದ್ಯೋಗಿ ಪದವೀಧರರು ನಿರಾಶರಾಗಿದ್ದಾರೆ.

‘ಯುವನಿಧಿ’ ಯೋಜನೆಯಡಿ 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾದ ಪದವೀಧರರು ಮತ್ತು ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳು ಮಾತ್ರ ಅರ್ಹರಾಗುತ್ತಾರೆ. ಪದವೀಧರರಿಗೆ 3 ಸಾವಿರ ಮತ್ತು ಡಿಪ್ಲೊಮ ಪಡವೀಧರರಿಗೆ 1,500 ರೂ. ಮಾಸಿಕ ಭತ್ಯೆ ಎರಡು ವರ್ಷಗಳಿಗೆ ಸೀಮಿತವಾಗಿ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ ಈ ಯೀಜನೆ ಕೆಲವೇ ಸಾವಿರ ಯುವಕರಿಗೆ ಮಾತ್ರ ಪ್ರಯೋಜನಕ್ಕೆ ಬರಲಿದೆ. ಈಗಾಗಲೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿರುವ ಲಕ್ಷಗಟ್ಟಲೆ ನಿರುದ್ಯೋಗಿಗಳಿಗೆ ಯೋಜನೆ ಅನ್ವಯವಾಗುವುದಿಲ್ಲ.

ಪದವಿ ಮುಗಿಸಿ 180 ದಿನಗಳಾದರೂ ಉದ್ಯೋಗ ಲಭಿಸದ 18 ರಿಂದ 25 ವರ್ಷ ವರ್ಷದೊಳಗಿನ ಯುವಕರ ಮಾಹಿತಿ ಸಂಗ್ರಹಿಸುತ್ತೇವೆ. ಇವರಲ್ಲಿ ಪದವೀಧರರಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮ ತೇರ್ಗಡೆಯಾದವರಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ಯೆ ಪಾವತಿ ಮಾಡುತ್ತೇವೆ ಎಂದು ಕಾಂಗ್ರೆಸ್‌ ಪಕ್ಷ ಚುನಾವಣಾ ಘೋಷಣೆ ವೇಳೆ ಹೇಳಿತ್ತು.

ಶನಿವಾರದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಹಾಗೂ ಡಿಪ್ಲೊಮಾ ಮುಗಿಸಿರುವವರಿಗೆ ಮಾತ್ರ ಮುಂದಿನ 2 ವರ್ಷದವರೆಗೆ ನಿರುದ್ಯೋಗ ಭತ್ಯೆ ನೀಡುತ್ತೇವೆ. ಇದರ ನಡುವೆ ಸರ್ಕಾರಿ ಅಥವಾ ಖಾಸಗಿ ಯಾವುದೇ ಉದ್ಯೋಗ ದೊರೆತರೆ ನಿರುದ್ಯೋಗ ಭತ್ಯೆ ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಹೀಗಾಗಿ ಪದವಿ ಮುಗಿಸಿ ಕಳೆದ 2-3 ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆಯುತ್ತಿರುವ ನಿರುದ್ಯೋಗಿಗಳಿಗೆ ಯೋಜನೆಯಿಂದ ಪ್ರಯೋಜನವಾಗುವುದಿಲ್ಲ ಎಂಬಂತಾಗಿದೆ.

ಇದೇ ರೀತಿ ಉಳಿದ ನಾಲ್ಕು ಗ್ಯಾರಂಟಿಗಳಿಗೂ ಸರಕಾರ ಕಠಿಣ ಷರತ್ತು ವಿಧಿಸಲಿದೆ. ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲ ಉಚಿತ ಭಾಗ್ಯಗಳನ್ನು ಕೊಡುವುದು ಸಾಧ್ಯವಿಲ್ಲ. ಅದಕ್ಕೆ ನೀತಿ ನಿಯಮ ರೂಪಿಸಬೇಕು ಎಂದು ಸಿದ್ದರಾಮಯ್ಯ ಹೇಳಿರುವುದೇ ಇದಕ್ಕೆ ಸಾಕ್ಷಿ.

ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರಂಟಿಗೂ ಇಂಥ ಷರತ್ತು ಅನ್ವಯವಾಗಲಿದೆ. ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳಲ್ಲಿ ಮಾತ್ರ ಉಚಿತ ಪ್ರಯಾಣ ಅವಕಾಶ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು