ಬೆಂಗಳೂರು: ಬಿಜೆಪಿಯು ನೂತನ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಅವಲೋಕನ ಸಭೆಯನ್ನು ಗುರುವಾರ ಮಾಡಲಾಗಿದೆ. ನಗರದ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳು ಬಿಜೆಪಿ ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ. ಜೊತೆಗೆ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಬಿಜೆಪಿ ಸೋಲಿಗೆ ಪರಾಜಿತ ಅಭ್ಯರ್ಥಿಗಳ ಸೋಲಿಗೆ ಕಾರಣಗಳ ಪಟ್ಟಿ ಹೀಗಿದೆ. ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಬಿಜೆಪಿ ಸೋಲಿಗೆ ಕಾರಣ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಯೋಜನೆಗಳು ಜನಮಾನಸವನ್ನು ತಲುಪುವಲ್ಲಿ ಸಫಲವಾಗಿದ್ದು ಬಿಜೆಪಿಗೆ ನೇರ ಹೊಡೆತ ಬಿದ್ದಿದೆ ಎಂದು ಹೇಳಿದ್ದಾರೆ. ಒಳ ಮೀಸಲಾತಿ ಹಂಚಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿದ್ದು, ಮತಗಳಿಕೆ ಪ್ರಮಾಣ ಕಡಿಮೆಯಾಗಿದೆ.
ಅದೇರೀತಿ 40 ಶೇ. ಕಮೀಷನ್ ಆರೋಪ ಸೇರಿ ಕೆಲವು ಭ್ರಷ್ಟಾಚಾರ ಆರೋಪ ಪ್ರಕರಣಗಳು ಬಿಜೆಪಿ ಹಿನ್ನಡೆಗೆ ಕಾರಣವಾಗಿದೆ. ಅಲ್ಲಲ್ಲಿ ಬೀಸಿದ ವಿರೋಧಿ ಅಲೆಯೂ ಕೂಡ ದುಷ್ಪರಿಣಾಮ ಬೀರಿದೆ. ಟಿಕೆಟ್ ಹಂಚಿಕೆಯಲ್ಲಿನ ವಿಳಂಬ ನೀತಿಯಿಂದ ಸಂಘಟನೆ ಪ್ರಚಾರಕ್ಕೆ ತೊಂದರೆಯಾಗಿದ್ದು, ಕೂಡ ಕೆಲ ಅಭ್ಯರ್ಥಿಗಳು ಸೋಲಲು ಕಾರಣವಾಗಿದೆ. ತಳಮಟ್ಟದ ಸಂಘಟನೆ ಬಿಟ್ಟು ಕೇವಲ ಹೈಕಮಾಂಡ್ ಮೇಲಿನ ಹೆಚ್ಚಿನ ಅವಲಂಬನೆ ಕೂಡ ಹಿನ್ನಡೆಗೆ ಕಾರಣವಾಗಿದೆ.
ಸಚಿವರು ಅಧಿಕಾರವಿದ್ದಾಗ ಸರಿಯಾಗಿ ಸ್ಪಂದಿಸಲಿಲ್ಲ ಇದು ಕೂಡ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲು ಕಾರಣವಾಯಿತು. ಪಕ್ಷದ ಮುಖಂಡರು ಅಭ್ಯರ್ಥಿಗಳ ಮಾತಿಗೆ ಬೆಲೆ ಕೊಡದೇ ಆಡಿದ್ದೇ ಆಟ ಎಂಬ ನಿಲುವು ಕೂಡ ಪಕ್ಷ ಹೀನಾಯ ಸ್ಥಿತಿ ತಲುಪಲು ಕಾರಣವಾಯಿತು. ಲಕ್ಷ್ಮಣ ಸವದಿ ಪಕ್ಷ ಬಿಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಡೆತ ನೀಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಕ್ಕಿ ಕೊಡುವುದನ್ನು ಕಡಿಮೆ ಮಾಡಿದ್ದೂ ಸೋಲಿನ ಹಲವು ಕಾರಣಗಳಲ್ಲೊಂದು ಎಂದು ಸೋತ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.