ಬೆಂಗಳೂರು: ಹಿಂದಿನ ಸರ್ಕಾರ ಮಾಡಿದ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯವು ದೋಷಪೂರಿತವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು, ‘ಮಕ್ಕಳು ತಿರುಚಿದ ಇತಿಹಾಸವನ್ನು ಏಕೆ ಅಧ್ಯಯನ ಮಾಡಬೇಕು’ ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಖರ್ಗೆ ನವದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದು. “ನಮ್ಮ ಮಕ್ಕಳಿಗೆ ಪಠ್ಯಪುಸ್ತಕಗಳಲ್ಲಿ ತಿರುಚಿದ ಇತಿಹಾಸವನ್ನು ಏಕೆ ಅಧ್ಯಯನ ಮಾಡಬೇಕು? ಯಾವ ವಿಷಯಗಳಲ್ಲಿ ಕಾನೂನು, ಮೌಲ್ಯ ಮೀರಿ ಪಠ್ಯ ಪುಸ್ತಕ ರಚನೆಯಾಗಿದೆ ಅದನ್ನು ನಾವು ಬದಲಾಯಿಸುತ್ತೇವೆ ಎಂದು ಹೇಳಿದರು.
ಕಳೆದ ವರ್ಷ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಮೈಸೂರು ದೊರೆ ಟಿಪ್ಪು ಸುಲ್ತಾನ್ ಅವರ ಇತಿಹಾಸ ವಿಷಯವನ್ನು ಪುಸ್ತಕಗಳಿಂದ ತೆಗೆದುಹಾಕಿತು. ಕರ್ನಾಟಕದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಹೆಡ್ಗೆವಾರ್ ಅವರ ಭಾಷಣವನ್ನು ಸೇರಿಸಿತು. ಆಗ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ಸಿಎಂ ಬಸವರಾಜ್ ಬೊಮ್ಮಾಯಿ ಈ ವಿಷಯ ಸಮರ್ಥಿಸಿಕೊಂಡರು.
ಇದೇ ವೇಳೆ ಹಿಂದುತ್ವ ವಿಚಾರವಾದಿ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಾಠವನ್ನು ತೆಗೆದು ಹಾಕುವಂತೆ ಹಲವರು ಒತ್ತಾಯಿಸಿದ್ದಾರೆ. ‘ತಾಯಿ ಭಾರತೀಯ ಅಮರಪುತ್ರರು ಎಂಬ ಶೀರ್ಷಿಕೆಯಡಿ ಹಿಂದಿನ ಬಿಜೆಪಿ ಸರ್ಕಾರ ಪಠ್ಯವಾಗಿ ಅಳವಡಿಸಿತ್ತು. ಕಳೆದ ವಾರ, ಹೋರಾಟಗಾರ ಮತ್ತು ಹಿರಿಯ ಶಿಕ್ಷಣತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕೆಲ ಪಠ್ಯ ವಿಷಯಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ‘ಮಕ್ಕಳಿಗೆ ಕೇಸರಿ ಸಿದ್ಧಾಂತ ಸೇರಿಸುವ ಅಗತ್ಯವಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದಾರೆ ಎಂದು ಖರ್ಗೆ ಹೇಳಿದರು.
ನಿರಂಜನಾರಾಧ್ಯ ಅವರು, ಹಿಂದಿನ ಸರ್ಕಾರ ರಚಿಸಿದ್ದ ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು ಪಠ್ಯಕ್ರಮವನ್ನು ಕೇಸರಿಮಯಗೊಳಿಸಿದೆ ಎಂದು ಆರೋಪಿಸಿದ್ದರು. ಅಲ್ಲದೆ ಡಾ.ಬಿ.ಆರ್.ನಂತಹ ಮಹಾನ್ ವ್ಯಕ್ತಿಗಳನ್ನು ಸಮಿತಿ ಅವಮಾನಿಸಿದೆ ಎಂದು ಹೇಳಿದ್ದರು.