ಬೆಂಗಳೂರು: ಕಾಂಗ್ರೆಸ್ ಗೆಲುವಿನ ನಂತರ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಹೇಳಿದ್ದಿಷ್ಟು:
ನಾನು ಪ್ರಚಾರ ಸಭೆಗಳಲ್ಲಿ ಹಾಗೂ ನಮ್ಮ ಹೈಕಮಾಂಡ್ ನವರ ಬಳಿ ಸುಮಾರು 130 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದೆ, ನನ್ನ ಮಾತು ನಿಜವಾಗಿದೆ. ಕಾಂಗ್ರೆಸ್ ಪಕ್ಷಷ ತನ್ನ ಸ್ವಂತ ಬಲದ ಮೇಲೆ ಸರ್ಕಾರ ಮಾಡಲಿದೆ ಎಂದು ಹೇಳಿದ್ದೆ, ಇದು ಕೂಡ ಸತ್ಯವಾಗಿದೆ. ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ, ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದರು, ಈ ಸರ್ಕಾರ ಎಷ್ಟು ಬೇಗ ತೊಲಗಿದ್ರು ಅಷ್ಟು ಒಳ್ಳೆಯದು ಎಂದು ಜನ ಕಾಯುತ್ತಿದ್ದರು, ಬಿಜೆಪಿಯವರ ಭ್ರಷ್ಟಾಚಾರಕ್ಕೆ ಜನ ಸರಿಯಾದ ಪಾಠ ಕಲಿಸಿದ್ದಾರೆ.
ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರು 150 ಸೀಟು ಗೆಲ್ಲುತ್ತೇವೆ ಎನ್ನುತ್ತಿದ್ದರು, ಅಮಿತ್ ಶಾ ಅವರ ಬಳಿ ಗೃಹ ಖಾತೆ ಇದೆ, ಇಂಟಲಿಜೆನ್ಸ್ ಏಜೆನ್ಸಿಗಳು ಇವೆ, ಅವರಿಗೆ ಸೋಲುತ್ತೇವೆ ಎಂದು ಗೊತ್ತಿದ್ದೂ ಕೂಡ ಸುಳ್ಳು ಹೇಳುತ್ತಿದ್ದರು. ಹಣದ ಬಲದಿಂದ ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕು ಎಂದು ಪ್ರಯತ್ನಿಸಿದ್ದರು ಆದರೆ ಜನ ಬಿಜೆಪಿಯನ್ನು ಸೋಲಿಸಬೇಕು ಎಂದು ನಿರ್ಧಾರ ಮಾಡಿದ್ದರು.
ಮೋದಿ ಅವರ ಪ್ರಭಾವ ಈ ಚುನಾವಣೆಯಲ್ಲಿ ಏನೇನೂ ನಡೆದಿಲ್ಲ. ನೂರು ಬಾರಿ ಮೋದಿ ಮತ್ತು ಅಮಿತ್ ಶಾ ಬಂದರೂ ಯಾವ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದೆ, ನನ್ನ ಮಾತು ನಿಜವಾಗಿದೆ. ಮೋದಿ ಅವರ ಪ್ರಚಾರ ರಾಜ್ಯದ ಜನರ ಮೇಲೆ ಯಾವ ಪರಿಣಾಮ ಬೀರಿಲ್ಲ. ಈ ಫಲಿತಾಂಶ ಲೋಕಸಭಾ ಚುನಾವಣೆಗೆ ಬಿಜೆಪಿಯವರಿಗೆ ಎಚ್ಚರಿಕೆಯ ಗಂಟೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿ ವಿರುದ್ಧವಾಗಿ ಜನ ಮತನೀಡುತ್ತಾರೆ, ಇದರಿಂದ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ.
ಸುಧಾಕರ್, ಎಸ್,ಟಿ ಸೋಮಶೇಖರ್, ಮುನಿರತ್ನ, ಎಂಟಿಬಿ ನಾಗರಾಜ್ ಸೋತಿದ್ದಾರೆ. ಹೀಗೆ ಕಾಂಗ್ರೆಸ್ ಗೆ ಮೋಸ ಮಾಡಿ ಹೋದವರು ಬಹಳಷ್ಟು ಜನ ಸೋತಿದ್ದಾರೆ. ಇನ್ನು ಕೆಲವು ಕಡೆ ಪ್ರಬಲವಾದ ಅಭ್ಯರ್ಥಿಗಳು ಇಲ್ಲದ ಕಾರಣಕ್ಕೆ ಕಾಂಗ್ರೆಸ್ ಬಿಟ್ಟು ಹೋದವರು ಗೆದ್ದಿದ್ದಾರೆ. ನಮ್ಮ ಬಳಿ ಸಂಪನ್ಮೂಲ ಕೊರತೆ ಇದ್ದಿದ್ದು ನಿಜ. ಅವರ ಬಳಿ ಸಾಕಷ್ಟು ಭ್ರಷ್ಟ ಹಣ ಇತ್ತು, ನಮ್ಮ ಬಳಿ ದುಡ್ಡಿರಲಿಲ್ಲ, ನಾವು ನಮ್ಮ ಅಭ್ಯರ್ಥಿಗಳಿಗೆ ಅಲ್ಪಸ್ವಲ್ಪ ಸಹಾಯ ಮಾಡಿದ್ದೆವು ಅಷ್ಟೆ.
ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದರು, ಆದರೆ ಪಶ್ಚಿಮ ಬಂಗಾಳ, ಒರಿಸ್ಸಾ, ಬಿಹಾರ, ತಮಿಳುನಾಡು, ಕೇರಳ, ತೆಲಂಗಾಣ, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ, ದೆಹಲಿ ಮುಂತಾದ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲ. ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಮಾಡಿ ಸರ್ಕಾರ ಮಾಡಿದ್ರು. ಹೀಗೆ ಬಿಜೆಪಿ ಇಡೀ ದೇಶದ ಎಲ್ಲಾ ರಾಜ್ಯಗಳಲ್ಲೂ ಅಧಿಕಾರದಲ್ಲಿ ಇಲ್ಲ.
ಈ ಬಾರಿ ನಮ್ಮ ಗೆಲುವಿನಿಂದ ಪಕ್ಷದ ಕಾರ್ಯಕರ್ತರು ಸ್ಪೂರ್ತಿ ಪಡೆದಿದ್ದಾರೆ. ಈ ಫಲಿತಾಂಶ ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಲಿದೆ. ನಾವು ಜನರಿಗೆ ಗ್ಯಾರೆಂಟಿಗಳನ್ನು ನೀಡಿದ್ದೇವೆ, ಅದರ ಬಗ್ಗೆ ಮೋದಿ ಅವರು ಬಹಳ ಲಘುವಾಗಿ ಮಾತನಾಡಿದ್ರು, ರಾಜ್ಯ ದಿವಾಳಿಯಾಗುತ್ತದೆ ಎಂದರು, ನಾನು 13 ಬಜೆಟ್ ಗಳನ್ನು ಮಂಡಿಸಿದ್ದೇನೆ. ಮೋದಿ ಅವರಿಗೆ ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಗೊತ್ತಿಲ್ಲ ಎಂದು ಕಾಣುತ್ತೆ. ನಮ್ಮ ಗ್ಯಾರೆಂಟಿಗಳಿಗೆ ಸುಮಾರು 50 ರಿಂದ 60 ಸಾವಿರ ಕೋಟಿ ಹಣ ಖರ್ಚಾದರೂ ಸರ್ಕಾರ ಭರಿಸಲು ಶಕ್ತವಾಗಿದೆ.
ಹೈಕಮಾಂಡ್ ಕಳುಹಿಸುವ ವೀಕ್ಷಕರು ಇಲ್ಲಿನ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಅಂತಿಮವಾಗಿ ಯಾವತ್ತಿನಿಂದ ಸರ್ಕಾರ ರಚನೆ ಆಗುತ್ತದೆ ಎಂದು ನಿರ್ಧರಿಸುತ್ತಾರೆ. ನಾಳೆ ನಡೆಯಲಿರುವ ಸಭೆಯ ನಂತರ ಈ ಎಲ್ಲಾ ವಿಚಾರಗಳು ಗೊತ್ತಾಗುತ್ತದೆ.
ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರು. ಅವರು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಬಳಿ ಚರ್ಚೆ ಮಾಡಿ ನಂತರ ನಿರ್ಧಾರ ಕೈಗೊಳ್ಳುತ್ತಾರೆ.