ರಾಮನಗರ : ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿದ್ದು, ಬುಧವಾರ ಶಿಕ್ಷಣ ಸಂಸ್ಥೆಗಳ ಅಂಗಳಗಳು ಬಿಕೋ ಎಂದವು. ಕಾಲೇಜುಗಳ ಮುಂದೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಹಿಜಾಬ್ಗೆ ಅನುಮತಿ ನೀಡುವಂತೆ ಒತ್ತಾಯಿಸಿ ಮಂಗಳವಾರ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಈ ಮೂಲಕ ವಿವಾದವು ರಾಮನಗರಕ್ಕೂ ಕಾಲಿಟ್ಟಿತ್ತು. ಇದಕ್ಕೆ ಪ್ರತಿಯಾಗಿ ನಗರದ ಪ್ರಥಮ ದರ್ಜೆ ಕಾಲೇಜು, ಜೂನಿಯರ್ ಕಾಲೇಜಿನ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತೆರಳಲು ಸಿದ್ಧತೆ ನಡೆದಿತ್ತು ಎನ್ನಲಾಗಿದೆ. ಸರ್ಕಾರ ಕಾಲೇಜುಗಳಿಗೆ ರಜೆ ಘೋಷಿಸಿದ ಕಾರಣ ಸದ್ಯ ಎಲ್ಲವೂ ತಣ್ಣಗಾದಂತೆ ಇದೆ.
ಬುಧವಾರ ಕಾಲೇಜುಗಳಿಗೆ ರಜೆ ಇದ್ದರೂ ಉಪನ್ಯಾಸಕರು, ಶಿಕ್ಷಕರು ಹಾಜರಾಗುವಂತೆ ಇಲಾಖೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಕರು ತಮ್ಮಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಬಂದು ಕಾಲ ಕಳೆದರು. ಆದರೆ ವಿದ್ಯಾರ್ಥಿಗಳಿಗೆ ಪ್ರವೇಶ ಇರಲಿಲ್ಲ. ನಗರದ ಜೂನಿಯರ್ ಕಾಲೇಜು, ಐಜೂರು ವೃತ್ತ ಸೇರಿದಂತೆ ವಿವಿಧೆಡೆ ಪೊಲೀಸ್ ವಾಹನಗಳು ಕಾವಲಿಗೆ ನಿಂತಿದ್ದವು.