ರಾಮನಗರ: ಪ್ರಪಂಚದಲ್ಲಿರುವ ಜೀವಿಗಳಲ್ಲಿ ಮನುಷ್ಯನು ಅತ್ಯಂತ ಶ್ರೇಷ್ಠನೆಂದು ಪರಿಗಣಿಸಲ್ಪಟ್ಟಿದ್ದಾನೆ. ಇಂತಹ ಮನುಷ್ಯ ಜನ್ಮವನ್ನು ಪ್ರತಿಯೊಬ್ಬರೂ ಸಾರ್ಥಕಪಡಿಸಿಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯದ ರಾಮನಗರ ಶಾಖೆ ಸಂಚಾಲಕಿ ಬಿ.ಕೆ.ದಿವ್ಯ ತಿಳಿಸಿದರು.
ನಗರದ ವಿದ್ಯಾನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯದ ಸ್ಥಳೀಯ ಸೇವಾ ಕೇಂದ್ರದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಆಯೋಜಿಸಿದ್ದ ಶಿವಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಹಾ ಶಿವರಾತ್ರಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಟ್ಟು ಅವರು ಮಾತನಾಡಿದರು.
ದೇವರಲ್ಲಿ ನಂಬಿಕೆ ಇಟ್ಟುಕೊಂಡಿರಬೇಕು, ಸತ್ಪುರುಷರ ಸಹವಾಸ ಮಾಡಬೇಕು. ತಂದೆ-ತಾಯಿ ಮತ್ತು ಗುರು ಹಿರಿಯರನ್ನು ದೇವರಂತೆ ಕಾಣಬೇಕು. ತಮ್ಮ ಕರ್ತವ್ಯಗಳನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಯಾರಿಗೂ ಯಾವ ರೀತಿಯ ತೊಂದರೆ ಕೊಡದೆ ಸಾಧ್ಯವಾದಷ್ಟು ಉಪಕಾರ ಮಾಡಬೇಕು. ನಮ್ಮ ದೇಶ ಮತ್ತು ಸಂಸ್ಕೃತಿಯ ಬಗ್ಗೆ ಗೌರವ ಹೊಂದಿರಬೇಕು. ಅತಿಯಾದ ಆಸೆಯನ್ನು ಬಿಟ್ಟು ದೇವರು ಕೊಟ್ಟಿರುವಷ್ಟರಲ್ಲಿಯೇ ತೃಪ್ತಿಪಡುವ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದರು.
ಇನ್ನೊಬ್ಬರಿಗೆ ನೋಡಿ ಅಸೂಯೆಪಡುವ ಸ್ವಭಾವ ಬಿಡಬೇಕು. ನಮಗೆ ಸಿಕ್ಕಿರುವ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡದೆ ಒಳ್ಳೆಯ ಕೆಲಸಗಳಿಗೆ ಮಾತ್ರವೇ ವಿನಿಯೋಗಿಸಬೇಕು. ನಾವು ಒಳ್ಳೆಯರಾಗುವ ಜೊತೆಗೆ ನಮ್ಮ ಮಕ್ಕಳಿಗೂ ಒಳ್ಳೆಯ ಮಾರ್ಗವನ್ನು ತೋರಿಸಬೇಕು. ಈ ರೀತಿಯಾಗಿ ನಡೆದುಕೊಂಡಾಗ ಮಾತ್ರವೇ ನಮ್ಮ ಜೀವನ ಸಾರ್ಥಕತೆ ಕಾಣುತ್ತದೆ ಎಂದು ಬಿ.ಕೆ.ದಿವ್ಯ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ವೈದ್ಯ ಡಾ.ಕೆ.ಪಿ.ಹೆಗ್ಡೆ ಹಿರಿಯ ವಕೀಲ ಕೆಂಪಯ್ಯ ನಿವೃತ್ತ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೆಂಕಟಾಚಲಯ್ಯ, ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರಿಯ ವಿಶ್ವ ವಿದ್ಯಾಲಯದ ಬ್ರಹ್ಮಕುಮಾರ, ಕುಮಾರಿಯರು ಉಪಸ್ಥಿತರಿದ್ದರು.