ರಾಮನಗರ: ತಾಲೂಕು ಹಾಗೂ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಮಾವು ಬೆಳೆಗೆ ಹಾನಿಯಾಗಿದ್ದು, ಮಾವು ಬೆಳೆಗಾರರಿಗೆ ಆಗಿರುವ ನಷ್ಟಕ್ಕೆ ಸ್ಪಂದಿಸಬೇಕು ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಮತ್ತು ಆಲಿಕಲ್ಲಿನಿಂದ ಕೊಯ್ಲಿಗೆ ಬಂದ ಮಾವು ಬೆಳೆಗೆ ಹಾನಿಯಾಗಿದೆ. ಕೊಯ್ಲಿನ ಸಮಯದಲ್ಲಿ ಅಕಾಲಿಕ ಮಳೆಯಿಂದ ಅಪಾರ ಬೆಳೆ ನಷ್ಟ ಉಂಟಾಗಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಆಲಿಕಲ್ಲಿನ ಹೊಡೆತಕ್ಕೆ ಮರದಲ್ಲಿದ್ದ ಮಾವು ಕೆಳಗೆ ಬಿದ್ದಿರುವುದು ಒಂದು ರೀತಿ ನಷ್ಟವಾದರೆ, ಮರದಲ್ಲೆ ಉಳಿದ ಮಾವಿಗೆ ಹುಳು ಬಿದ್ದು ಕೊಳೆತು ಹೋಗುತ್ತದೆ. ಎರಡು ಉಪಯೋಗಕ್ಕೆ ಬರುವುದಿಲ್ಲ, ತಕ್ಷಣವೇ ತೋಟಗಾರಿಕಾ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಸರ್ವೆ ನಡೆಸಿ ನಷ್ಟವನ್ನು ನಿಖರವಾಗಿ ತಿಳಿದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ರಾಮನಗರ, ಮಾಗಡಿ, ಕನಕಪುರ, ಚನ್ನಪಟ್ಟಣ, ಕೋಲಾರ, ಚಿಕ್ಕಬಳ್ಳಾಪುರದ ಬಹುತೇಕ ಭಾಗಗಳಲ್ಲಿ ಮಾವು ಬೆಳೆಗಾರರು ಕಂಗಾಲಾಗಿzರೆ. ಇದರ ಜೊತೆ ಅಕಾಲಿಕ ಮಳೆ ಮತ್ತು ಗುಡುಗು, ಸಿಡಿಲಿನಿಂದ ರೈತರ ಸಾವು, ದನಕರುಗಳ ಸಾವು ಸಂಭವಿಸಿದೆ. ಮನೆಗಳಿಗೆ ನೀರು ನುಗ್ಗಿ ರಾಮನಗರ ತಾಲ್ಲೂಕಿನ ಮಾಯಗಾನಹಳ್ಳಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಕಳೆದ ವರ್ಷದಲ್ಲಿ ರಾಮನಗರದ ಅರ್ಕೇಶ್ವರ ಕಾಲೋನಿ ಸಂಪೂರ್ಣ ಮಳೆಯಿಂದ ಜಲಾವೃತವಾಗಿತ್ತು. ಈ ತಕ್ಷಣವೇ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲನೆ ಮಾಡಿ ಪರಿಹಾರ ಘೋಷಣೆ ಮಾಡಿ ಹಣ ಬಿಡುಗಡೆ ಮಾಡಿ ಸರ್ಕಾರ ರೈತರ ನೆರವಿಗೆ ಬರಬೇಕೆಂದು ಅಶ್ವಥ ನಾರಾಯಣ ಮನವಿ ಮಾಡಿದ್ದಾರೆ.