ರಾಮನಗರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ವೈ.ಜಿ.ಗುಡ್ಡ-ಕಣ್ವ ನೀರಾವರಿ ಯೋಜನೆಗೆ ಅಸ್ತು ನೀಡಲಾಗುವುದು. ಇದರಿಂದ ಕೂಟಗಲ್ ಹೋಬಳಿಯ ನಾನಾ ಗ್ರಾಮಗಳು ಹಸಿರುಮಯವಾಗಲಿವೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.
ತಾಲ್ಲೂಕಿನ ಕೂಟಗಲ್ ಹೋಬಳಿ ಶ್ಯಾನುಭೋಗಹಳ್ಳಿ ಗ್ರಾಪಂ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿ ಮತಯಾಚನೆ ಮಾಡುವ ವೇಳೆ ಕ್ಯಾಸಾಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹಿಂದಿನ ಮೈತ್ರಿ ಸರ್ಕಾರದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಶ್ರಮದ ಫಲವಾಗಿ ಅನುಷ್ಠಾನವಾಗಿರುವ ಸತ್ತೇಗಾಲ ನೀರಾವರಿ ಯೋಜನೆಯಡಿ ಮಂಚನಬೆಲೆ ಮತ್ತು ವೈ.ಜಿ.ಗುಡ್ಡ ಜಲಾಶಯಗಳಿಗೆ ನೀರು ಹರಿಸಲಾಗುತ್ತಿದೆ. ಇದೀಗ ವೈ.ಜಿ.ಗುಡ್ಡ ಜಲಾಶಯದಿಂದ ಕಣ್ವ ಜಲಾಶಯಕ್ಕೆ ಪೈಪ್ ಲೈನ್ ಮೂಲಕ ನೀರು ಹರಿಸುವ ಯೋಜನೆ ಕುರಿತು ಸಂಸದ ಡಿ.ಕೆ.ಸುರೇಶ್ ಅವರ ಬಳಿ ಈಗಾಗಲೇ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ನೀರಾವರಿ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಅವರು ತಿಳಿಸಿದರು.
ವೈ.ಜಿ.ಗುಡ್ಡ ಜಲಾಶಯದಿಂದ ಏತನೀರಾವರಿ ಮೂಲಕ ನೀರು ಪಂಪ್ ಮಾಡಿ ಸೀಗೆಕುಪ್ಪೆ ಹಾಗೂ ಚಕ್ರಭಾವಿ ಕಡೆಯಿಂದ ನೀರು ಹರಿಸಿ ಈ ಭಾಗದ ನದಿಗಳಿಗೆ ಜೀವ ಕೊಡುವ ಆಲೋಚನೆಯಿದೆ. ಹಿಂದೆ ಜೆಡಿಎಸ್ನಲ್ಲಿ ವಿರೋಧ ಪಕ್ಷದ ಶಾಸಕನಾಗಿದ್ದರಿಂದ ಈ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ. ಜನರು ನನ್ನನ್ನು ಆರ್ಶೀವದಿಸಿದರೆ ಕೂಟಗಲ್ ಹೋಬಳಿಗೆ ನೀರಾವರಿ ಯೋಜನೆ ತಂದು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದಾಗಿ ಬಾಲಕೃಷ್ಣ ಭರವಸೆ ನೀಡಿದರು.
ಕಳೆದ ಚುನಾವಣೆಯಲ್ಲಿ ನಾನಾ ಕಾರಣಗಳಿಂದ ವಾತಾವರಣ ವ್ಯತ್ಯಾಸವಾಗಿತ್ತು, ಈ ಬಾರಿ ಬಹಳಷ್ಟು ಬದಲಾವಣೆಯಾಗಿದೆ. ಕೂಟಗಲ್ ಹೋಬಳಿಯ ಅನೇಕ ಪ್ರಭಾವಿ ನಾಯಕರು ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿರುವುದು ಪಕ್ಷದ ನೈತಿಕ ಶಕ್ತಿಯನ್ನು ವೃದ್ಧಿಸಿದಂತಾಗಿದೆ. ಕಳೆದ ಐದು ವರ್ಷದಲ್ಲಿ ಜನರಿಗೆ ಸುಳ್ಳು ಹೇಳಿಕೊಂಡು ಓಡಾಡಿದ್ದೆ ಹಾಲಿ ಶಾಸಕ ಸಾಧನೆಯಾಗಿದೆ. ಯಾರ್ಯಾರ ಯೋಗ್ಯತೆ ಏನೆಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಹೀಗಾಗಿ ಅಸಂಖ್ಯಾತ ಕಾರ್ಯಕರ್ತರು ಹಾಗೂ ಮುಖಂಡರು ಸ್ವಪ್ರೇರಣೆಯಿಂದ ಪಕ್ಷಕ್ಕೆ ಕೆಲಸ ಮಾಡುತ್ತಿದ್ದಾರೆ ಎಂದು ಬಾಲಕೃಷ್ಣ ವಿಶ್ವಾಸದಿಂದ ನುಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ, ಹಿರಿಯ ಮುಖಂಡ ಹೆಚ್.ಎಂ.ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್, ತಾಪಂ ಮಾಜಿ ಅಧ್ಯಕ್ಷರಾದ ಡಿ.ಎಂ.ಮಹದೇವಯ್ಯ, ಎಸ್.ಪಿ.ಜಗದೀಶ್, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು, ಗ್ರಾಪಂ ಸದಸ್ಯ ಅರೇಹಳ್ಳಿ ಗಂಗಾಧರ್, ದಿಶಾ ಸಮಿತಿ ಸದಸ್ಯೆ ಕಾವ್ಯ, ಎಪಿಎಂಸಿ ಮಾಜಿ ನಿರ್ದೇಶಕ ಪುಟ್ಟಮಾರೇಗೌಡ, ಮುಖಂಡರಾದ ಕೂಟಗಲ್ ನಾಗರಾಜು, ಜಾಲಮಂಗಲ ಚಂದ್ರು, ವಕೀಲ ಶಿವಣ್ಣ, ಪಂಚಾಕ್ಷರಿ, ಶ್ರೀಧರ್ ಮುಂತಾದವರು ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.