News Karnataka Kannada
Thursday, March 28 2024
Cricket
ರಾಮನಗರ

ರಾಮನಗರ: ಕುಟುಂಬ ರಾಜಕಾರಣದ ವಿರುದ್ಧ ಸುಮಲತಾ ಆಕ್ರೋಶ

ramanagara-sumalatha-slams-family-politics
Photo Credit : By Author

ರಾಮನಗರ: ಕ್ಷೇತ್ರದ ಜನರು ಬೇರೆ ಪಕ್ಷಗಳಿಗೆ ಅಧಿಕಾರ ಕೊಟ್ಟು ಅವರ ಸ್ವಾರ್ಥ ಮತ್ತು ಕುಟುಂಬ ರಾಜಕಾರಣದಿಂದ ಬೇಸತ್ತಿದ್ದು, ಈ ಬಾರಿ ಅದನ್ನು ಬದಲಾಯಿಸಲು ಮನಸ್ಸು ಮಾಡಿದ್ದಾರೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಹೇಳುವುದರೊಂದಿಗೆ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಗೌತಮ್‌ಗೌಡ ಅವರ ಪರ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಹಾಗೂ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಪಾಸಿಟಿವ್ ವಾತಾವರಣ ನಿರ್ಮಾಣವಾಗಿದೆ. ಜನರು ಮೋದಿ ನಾಯಕತ್ವ ಮೆಚ್ಚಿಕೊಂಡಿದ್ದು, ಈ ಭಾಗದಲ್ಲಿ ಬದಲಾವಣೆಯ ಅಲೆ ಎದ್ದಿದೆ. ಸ್ವಾರ್ಥ ಮತ್ತು ಕುಟುಂಬ ರಾಜಕಾರಣವನ್ನು ಬದಲಾಯಿಸಲು ಇಲ್ಲಿನ ಜನರು ಮನಸ್ಸು ಮಾಡಿದ್ದಾರೆ. ರಾಮನಗರದಲ್ಲಿಯೂ ಈ ಬಾರಿ ಎಲ್ಲರಿಗೂ ಆಶ್ಚರ್ಯವಾಗುವ ಫಲಿತಾಂಶ ಬರಲಿದೆ ಎಂದು ಹೇಳಿದರು.

ಬಿಜೆಪಿ ಯುವಸಮುದಾಯಕ್ಕೆ ಹಾಗೂ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದೆ. ಯುವಕರಿಗೆ ಅವಕಾಶ ಕೊಡುತ್ತಿರುವ ಪಕ್ಷ ಅಂದರೆ ಬಿಜೆಪಿ ಮಾತ್ರ. ಇಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶ ಇಲ್ಲ. ಸಮರ್ಥರು ಹಾಗೂ ಜನರ ಕಾಳಜಿ ಇರುವ ಅಭ್ಯರ್ಥಿಗಳಿಗೆ ಮಣೆ ಹಾಕಿದ್ದಾರೆ. ಹೀಗಾಗಿ ಎಲ್ಲಾ ಕಡೆ ಬದಲಾವಣೆಯ ಗಾಳಿ ಬೀಸುತ್ತಿದೆ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ತಿಳಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ನನ್ನ ವಿರುದ್ಧ ಕುತಂತ್ರ ಮಾಡಿದವರೇ ಕುತಂತ್ರದ ಬಗ್ಗೆ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಕುತಂತ್ರ ಮಾಡುವವರೇ ಕುತಂತ್ರದ ಬಗ್ಗೆ ಮಾತನಾಡುತ್ತಿರುವುದು ನನಗೆ ಆಶ್ಚರ್ಯವಾಗುತ್ತಿದೆ. ಮಂಡ್ಯ ಸಂಸತ್ ಚುನಾವಣೆಯಲ್ಲಿ ಏನೆಲ್ಲ ಕುತಂತ್ರ ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿರವರ ಬಿಜೆಪಿ- ಕಾಂಗ್ರೆಸ್ ಹೊಂದಾಣಿಕೆ ರಾಜಕಾರಣದ ಆರೋಪಕ್ಕೆ ಸಂಸದೆ ಸುಮಲತಾ ಅಂಬರೀಷ್ ತಿರುಗೇಟು ನೀಡಿದರು.

ಮಂಡ್ಯದಲ್ಲಿ ನನ್ನ ವಿರುದ್ಧ ನಾಲ್ಕು ಮಂದಿ ಸುಮಲತಾ ಎಂಬು ಹೆಸರಿನವರನ್ನು ಕಣಕ್ಕಿಳಿಸಿದ್ದರು. ಎಲ್ಲ ರೀತಿಯ ಕುತಂತ್ರ ಮಾಡಿ ಬೇರೆಯವರ ಮೇಲೆ ಆರೋಪ ಮಾಡುವುದು ಎಷ್ಟು ಸರಿ. ಮಂಡ್ಯದ ರೀತಿ ಇಲ್ಲಿಯೂ ಕುತಂತ್ರ ರಾಜಕಾರಣ ನಡೆಯುತ್ತಿದೆ ಎಂದು ಆರೋಪ ಮಾಡುವುದು ನಿಜಕ್ಕೂ ಹಾಸ್ಯಾಸ್ಪದ ಎಂದರು. ವಿಜಯಪುರದಲ್ಲಿ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ. ಈ ರೀತಿ ನಾಲ್ಕು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಬಹಿರಂಗವಾಗಿ ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ. ಹೊಂದಾಣಿಕೆ ರಾಜಕಾರಣ ಎಲ್ಲಿ ನಡೆಯುತ್ತಿದೆ ಎಂಬುದು ಇದರಿಂದಲೇ ತಿಳಿಯುತ್ತದೆ ಎಂದರು.

ರಾಮನಗರ ಕ್ಷೇತ್ರದಲ್ಲಿಯೂ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಇಲ್ಲಿ ಕಾಂಗ್ರೆಸ್ ನವರು ಬಲಿಷ್ಠ ಅಭ್ಯರ್ಥಿಯನ್ನು ಏಕೆ ಕಣಕ್ಕಿಳಿಸಲಿಲ್ಲ. ಜೆಡಿಎಸ್ ಅನ್ನು ಗೆಲ್ಲಿಸುವ ಉದ್ದೇಶದಿಂದಲೇ ಕಾಂಗ್ರೆಸ್ ನವರು ಪ್ರಬಲ ಅಭ್ಯರ್ಥಿಯನ್ನು ಇಳಿಸಿಲ್ಲ. ಅದೇ ರೀತಿ ಜೆಡಿಎಸ್ ನವರು ಕನಕನಪುರ ಕ್ಷೇತ್ರದಲ್ಲಿ ಬಲಿಷ್ಠ ಅಭ್ಯರ್ಥಿಯನ್ನು ಹಾಕುವುದಿಲ್ಲ. ಕಳೆದ ಚುನಾವಣೆಯಲ್ಲಿ ಏನಾಯಿತು. ಚುನಾವಣೆ ಮುಗಿದ ಮೇಲೆ ಇಬ್ಬರೂ ಸೇರಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರು. ಈಗಲೂ ಅದು ನಡೆಯುವುದಿಲ್ಲ ಅಂತಾ ನೀವು ನಂಬುತ್ತೀರಾ ಎಂದು ಪ್ರಶ್ನಿಸಿದರು.

ಸುಮಲತಾ ವಿರುದ್ಧ ಕುಮಾರಸ್ವಾಮಿ ಮಾತನಾಡದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಇದೇ ಸಂಸ್ಕಾರ ನನ್ನ ಚುನಾವಣೆಯಲ್ಲೂ ತೋರಿಸಬೇಕಿತ್ತು. ಈಗ ಮೋಸದ ಮಾತಿಗೆ ಯಾರೂ ಮರುಳಾಗುವುದಿಲ್ಲವೆಂದು ಎಲ್ಲರಿಗೂ ಗೊತ್ತಾಗಿದೆ.

ಮೊದಲ ಪಾರ್ಲಿಮೆಂಟ್ ನಲ್ಲಿ ಬಿಜೆಪಿ 4 ಸ್ಥಾನದಲ್ಲಿತ್ತು. ಇವತ್ತು 304 ಸ್ಥಾನಕ್ಕೆ ಹೆಚ್ಚಳವಾಗಿದೆ. ಯಾವುದನ್ನೂ ಅಸಾಧ್ಯ ಎಂದು ಹೇಳಲು ಆಗದು. ಸವಾಲನ್ನು ಎದುರಿಸಿ ಮುನ್ನಡೆಯಬೇಕು ಎಂದು ಸುಮಲತಾ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಜೆಪಿ ಅಭ್ಯರ್ಥಿ ಗೌತಮ್‌ಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರುದ್ರದೇವರು, ಮುಖಂಡರಾದ ಸುರೇಶ್, ಎಸ್.ಆರ್.ನಾಗರಾಜು, ಡಾ.ಪುಣ್ಯಾವತಿ, ಜಿ.ವಿ.ಪದ್ಮನಾಭ, ವಿ.ರಾಜು, ಚಂದ್ರಶೇಖರ್ ರೆಡ್ಡಿ ಮುಂತಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು