ರಾಮನಗರ: ದೇವೇಗೌಡರ ಕುಟುಂಬ ರಾಜಕಾರಣದ ವಿರುದ್ಧ ಸಂಸದೆ ಸುಮಲತಾ ಅಂಬರೀಷ್ ವಾಗ್ದಾಳಿ ನಡೆಸಿದ್ದಾರೆ. ಜೆಡಿಎಸ್ನಲ್ಲಿ ತಂದೆ ಶಾಸಕ, ಮಗ ಶಾಸಕ, ಪ್ರಸ್ತುತ ಮೊಮ್ಮಗ ಶಾಸಕನಾಗಲು ಯತ್ನಿಸುತ್ತಿದ್ದಾರೆ ಎಂದು ಜೆಡಿಎಸ್ ಕುಟುಂಬ ರಾಜಕಾರಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಚುನಾವಣಾ ಪ್ರಚಾರ ವೇಳೆ ಅವರು ಮಾತನಾಡಿದರು. ಅಂಬರೀಶ್ ಅವರ ರಾಜಕೀಯ ಜೀವನ ಆರಂಭವಾದದ್ದು ರಾಮನಗರದಿಂದ ಎಂದು ಸುಮಲತಾ ಹೇಳಿದರು. ರಾಮನಗರದ ಮತದಾರರೊಂದಿಗೆ ನಮ್ಮ ಕುಟುಂಬ ಉತ್ತಮ ಬಾಂಧವ್ಯ ಹೊಂದಿದೆ. ಬಿಜೆಪಿ ಮಹಿಳೆಯರನ್ನು ಗೌರವಿಸುತ್ತದೆ. ಮಂಡ್ಯದಲ್ಲಿ ನನ್ನ ವಿರುದ್ಧ ಸ್ಪರ್ಧಿಸಿದವರೇ ಇಲ್ಲಿ ಸ್ಪರ್ಧಿಸಿದ್ದಾರೆ. ನಾನು ಅವರ ಕುಟುಂಬದ ವಿರುದ್ಧ ಸ್ಪರ್ಧಿಸಿದ್ದು ಅವರ ದೃಷ್ಟಿಯಲ್ಲಿ ದೊಡ್ಡ ತಪ್ಪಾಗಿದೆ. ಮಹಿಳೆ ಎಂಬ ಗೌರವವಿಲ್ಲದೆ ಜೆಡಿಎಸ್ ಮಾತನಾಡುತ್ತಿದೆ ಎಂದು ಟೀಕಿಸಿದರು.
ಆದರೆ ಮಂಡ್ಯದ ಜನ ನನ್ನ ಬೆಂಬಲಕ್ಕೆ ನಿಂತರು. ಭದ್ರಕೋಟೆ, ಜಾತಿಯ ನಡುವೆಯೂ ಮಂಡ್ಯದ ಜನತೆ ಸ್ವಾಭಿಮಾನ ಕಳೆದುಕೊಳ್ಳಲಿಲ್ಲ. ನನ್ನನ್ನು ಆಯ್ಕೆ ಮಾಡುವ ಮೂಲಕ ವಂಶಪಾರಂಪರ್ಯ ಆಡಳಿತದ ಸೊಕ್ಕು ಮುರಿದರು ಎಂದರು.