ತುಮಕೂರು : ರಸ್ತೆಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಶಿಕ್ಷಕ ದಂಪತಿ ದುರ್ಮರಣಕ್ಕೀಡಾದ ಘಟನೆ ಮಲ್ಲಸಂದ್ರ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಗುಬ್ಬಿ ತಾಲೂಕಿನ ದಂಪತಿ ಈಶ್ವರಪ್ಪ (52) ಮತ್ತು ಕಲ್ಪನಾ(48) ಮೃತರು.
ದಂಪತಿ ಇಬ್ಬರೂ ಶಿಕ್ಷಕರಾಗಿದ್ದರು. ಗುಬ್ಬಿಯ ಖಾಸಗಿ ಶಾಲೆಯಲ್ಲಿ ಈಶ್ವರಪ್ಪ, ಗುಬ್ಬಿ ಸರ್ಕಾರಿ ಶಾಲೆಯಲ್ಲಿ ಕಲ್ಪನಾ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರ ದಂಪತಿ ಇಬ್ಬರೂ ಕಾರಿನಲ್ಲಿ ತುಮಕೂರು ಕಡೆಯಿಂದ ಗುಬ್ಬಿಗೆ ಹೋಗುತ್ತಿದ್ದರು. ಮಾರ್ಗಮಧ್ಯೆ ನಿಯಂತ್ರಣ ತಪ್ಪಿದ ಕಾರು, ರಸ್ತೆಬದಿ ನಿಂತಿದ್ದ ಲಾರಿಗೆ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಗಂಡ-ಹೆಂಡತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಬಂದ ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.