ತುಮಕೂರು: ಶಾಲಾ ಮಕ್ಕಳ ಬಿಸಿಯೂಟದ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಹೆಸರು ಇಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.
ಡಾ.ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವ ಪ್ರಯುಕ್ತ ಸಿದ್ಧಗಂಗಾ ಕ್ಷೇತ್ರದಲ್ಲಿ ಆಯೋಜಿಸಿರುವ ‘ನಡೆದಾಡುವ ದೇವರ ಬಸವ ಭಾರತ’ ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ಮಾಡಿದ ಬಿ.ವೈ.ವಿಜಯೇಂದ್ರ, ರಾಜ್ಯದಲ್ಲಿ ಲಕ್ಷಾಂತರ ಮಕ್ಕಳಿಗೆ ನೀಡುತ್ತಿರುವ ಬಿಸಿಯೂಟ ಯೋಜನೆಗೆ ಡಾ.ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಬೇಕು ಎಂದು ಸಿಎಂಗೆ ಮನವಿ ಮಾಡಿದರು.
ಈ ಮನವಿ ಪರಿಗಣಿಸಿದ ಸಿಎಂ, ಮಕ್ಕಳ ಬಿಸಿಯೂಟದ ಯೋಜನೆಗೆ ಸಿದ್ಧಗಂಗಾ ಶ್ರೀಗಳ ಹೆಸರು ಇಡುವುದಾಗಿ ವೇದಿಕೆಯಲ್ಲೇ ಘೋಷಿಸಿದರು.
ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿ ನಡೆದಾಡಿದ ಮಣ್ಣಿನಲ್ಲಿ ಭಕ್ತನಾಗಿ ಆಗಮಿಸಿ ಅಳಿಲು ಸೇವೆ ಸಲ್ಲಿಸುವುದು ನನ್ನ ಪುಣ್ಯ. ಈ ಸ್ಥಳದಲ್ಲಿ ಒಂದು ಅಗೋಚರ ಶಕ್ತಿಯಿದೆ. ಇಲ್ಲಿಗೆ ಬಂದು ಹೋದರೆ ಬದುಕಿಗೆ ದಾರಿ ಕಾಣಲಿದೆ.
ಜನರ ಭಾವನೆ ಅರ್ಥ ಮಾಡಿಕೊಂಡು ಮಠದ ಪರಂಪರೆಯನ್ನು ಮುಂದುವರಿಸಲಾಗಿದೆ. 88 ವರ್ಷ ಮಠದಲ್ಲಿ ಸೇವೆ ಸಲ್ಲಿಸಿರುವುದು ಸಾಮಾನ್ಯ ವಿಷಯವಲ್ಲ, ಅವರು ಹಚ್ಚಿರುವ ಮಠದ ಒಲೆಯ ಕಿಚ್ಚು ಇಂದಿಗೂ ಉರಿಯುತ್ತಿದೆ, ಬಡ ಮಕ್ಕಳ ಹೊಟ್ಟೆಯ ಕಿಚ್ಚು ತಣ್ಣಗಾಗುತ್ತಿದೆ. ಕೋಟಿಕೋಟಿ ಗುರುವಂದನೆಯನ್ನು ಪರಮಪೂಜ್ಯರಿಗೆ ಸದಾ ಸಲ್ಲಿಸಬೇಕು, ಸ್ವಾಮೀಜಿ ನಮಗೆಲ್ಲಾ ಪ್ರೇರಣೆಯಾಗಿದ್ದು, ಆಶಿರ್ವಾದ ಮಾಡುತ್ತಿದ್ದಾರೆ ಎಂದರು.
ಸಾವಿನ ನಂತರವೂ ಬದುಕಿರುವುರು ನೈಜ ಸಾಧಕನಿಂದ ಮಾತ್ರ ಸಾಧ್ಯ. ಡಾ.ಶಿವಕುಮಾರ ಸ್ವಾಮೀಜಿ ಕೇವಲ ಪರಮಪೂಜ್ಯರಾಗಿಲ್ಲ, ಬದುಕಿಗೆ ದಾರಿ ತೋರಿದ ಹಾಗೂ ಬದುಕು ಕಟ್ಟಿ ಕೊಟ್ಟ ಮಹಾನ್ ಸಾಧಕರು. ಸ್ವಾಮೀಜಿ ಅವರಲ್ಲಿ ದೈವಶಕ್ತಿ ಇತ್ತು. ಅವರ ಶ್ರದ್ಧೆ, ನಿಷ್ಠೆ ಹಾಗೂ ಪರಿಶ್ರಮ ಅವರ ಧ್ಯೇಯವಾಗಿತ್ತು. ಅದನ್ನು ಪರಿಪಾಲನೆ ಮಾಡುವುದು ನಮ್ಮ ಕರ್ತವ್ಯ. ಎಲ್ಲಾ ಸಮುದಾಯ, ವರ್ಗದ ಜನರನ್ನು ಪ್ರೀತಿಸಿ, ಬದುಕು ಕಟ್ಟಿಕೊಟ್ಟ ಮಹಾನ್ ಚೇತನ ಸಿದ್ಧಗಂಗಾ ಶ್ರೀಗಳು. ಸರ್ವೋದಯ ಹಾಗೂ ಅತ್ಯೋಂದಯ ಪರಿಕಲ್ಪನೆ ಮಠದಲ್ಲಿ ಸದಾ ನಡೆಯುತ್ತಿದೆ. ಇದು ಕರ್ನಾಟಕಕ್ಕೆ ವಿಸ್ತಾರವಾಗಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.