ತುಮಕೂರು: ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಬರುವುದು ಸಹಜ ಅದೆಲ್ಲವನ್ನು ಮೀರಿ ಶಾಸಕರಾದವರು ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಹೇಳಿದರು.
ನಗರದ ಶಂಕರಮಠದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಚುನಾವಣೆಯಲ್ಲಿ ಶಾಸಕರಾಗಿ ಜ್ಯೋತಿ ಗಣೇಶ್ ಮಾತ್ರವಲ್ಲದೆ ಬೆಂಗಳೂರಿನ ಜಯನಗರ ಕ್ಷೇತ್ರದಿಂದ ಸಿ..ಕೆ.ರಾಮಮೂರ್ತಿ ಅವರು ಗೆಲುವು ಸಾಧಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಈ ಗೆಲುವಿನ ಹಿಂದೆ ಅನೇಕ ವರ್ಷಗಳ ಹೋರಾಟವಿದೆ. ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ. ಈಗಿನ ಪರಿಸ್ಥಿತಿಯಲ್ಲಿ ರಾಜಕಾರಣ ಮಾಡುವುದು ಕಷ್ಟವಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಶಾಸಕರು ಮಾಡಬೇಕಿದೆ. ಶಾಸಕರ ಕೆಲಸ ಸುಲಭವಾದ ಕೆಲಸವಲ್ಲ. ಅದು ಜವಾಬ್ದಾರಿ ಯುತವಾದ್ದದ್ದು ಎಂದರು.
ಸಿ.ಕೆ.ರಾಮಮೂರ್ತಿ ಅವರು ರಕ್ಷಾ ಫೌಂಡೇಷನ್ ಮೂಲಕ ಅನೇಕ ಬಡವರಿಗೆ ಸಹಾಯ ಮಾಡಿಕೊಂಡು ಬಂದಿದ್ದಾರೆ. ಅವರಂತೆಯೇ ಶಾಸಕ ಜ್ಯೋತಿಗಣೇಶ್ ಸಹ ಸೇವೆ ಸಲ್ಲಿಸುತ್ತಿದ್ದು ಇದು ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ನನ್ನ ಗೆಲುವಿಗೆ ಬ್ರಾಹ್ಮಣ ಸಮುದಾಯದ ಬೆಂಬಲವೂ ಸಾಕಷ್ಟಿದೆ. ಜಿಲ್ಲೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ. ಇದು ಸಹ ನನ್ನ ಗೆಲುವಿಗೆ ಕಾರಣವಾಗಿದೆ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ನಾವು ದೇವರುಗಳಲ್ಲ ನಮ್ಮ ವ್ಯಾಪ್ತಿಯಲ್ಲಿ ನಾನು ಕಾರ್ಯ ನಿರ್ವಹಿಸುತ್ತೇನೆ. ನಿಮ್ಮ ಸಮುದಾಯಕ್ಕೆ ಮುಂದಿನ ದಿನಗಳಲ್ಲಿ ತಮ್ಮ ಕೈಲಾದ ನೆರವು ನೀಡಲಾಗುವುದು ಎಂದರು.
ಶಾಸಕ ಸಿ.ಕೆ.ರಾಮಮೂರ್ತಿ ಮಾತನಾಡಿ, ಬೆಂಗಳೂರಿನಲ್ಲಿ ಚುನಾವಣೆ ಬಹಳ ಕಷ್ಟ. ಪಕ್ಷಗಳ ಉಚಿತ ಘೋಷಣೆಗಳ ನಡುವೆಯೂ ನಾನು ಗೆಲುವು ಸಾಧಿಸಿರುವುದು ಖುಷಿ ನೀಡಿದೆ. ಜನರು ನನ್ನ ಸೇವೆ ಮೆಚ್ಚಿ ಆರ್ಶೀವಾದ ಮಾಡಿದ್ದು ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದರು.
ತುಮಕೂರು ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಹೆಚ್.ಎನ್. ಚಂದ್ರಶೇಖರ್ ಮಾತನಾಡಿ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ತಮ್ಮ ಶಾಸಕರ ಅನುದಾನದಲ್ಲಿ ಅನೇಕ ದೇವಸ್ಥಾನ ಗಳ ಅಭಿವೃದ್ಧಿ ಗೆ ಕಾರಣಿಭೂತರಾಗಿದ್ದಾರೆ. ನಮ್ಮ ಸಮುದಾಯದಿಂದ ೧೧ ಮಂದಿ ಶಾಸಕರಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ. ಅಶೋಕ್ ಹಾರನಹಳ್ಳಿ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿ ಬಂದ ನಂತರ ನಮ್ಮ ಸಮುದಾಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಅವರ ಈ ಕಾರ್ಯ ನಿರಂತರವಾಗಿ ನಡೆಯಲಿ ಎಂದರು.
ಕೈಗಾರಿಕೋದ್ಯಮಿ ಹೆಚ್.ಜಿ.ಚಂದ್ರಶೇಖರ್, ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್ ಮತ್ತಿತರರಿದ್ದರು.