ತುಮಕೂರು: ಅರಣ್ಯ ಇಲಾಖೆಯವರ ನಿರ್ಲಕ್ಷ್ಯ ದಿಂದ ಬಡ ಕಾರ್ಮಿಕ ಬಲಿಯಾಗಿರುವ ಘಟನೆ ಸೋಮವಾರ ರಾತ್ರಿ ನಾಮದ ಚಿಲುಮೆ ಬಳಿ ನಡೆದಿದೆ.
ದುರ್ಗದಹಳ್ಳಿ ಬಳಿ ತಿಮ್ಮನಾಯಕನ ಪಾಳ್ಯದ ರಂಗನಾಥ್ (22), ನಗರದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ತೆರಳುವಾಗ ರಸ್ತೆಯಲ್ಲಿ ಮರ ಬಿದ್ದಿರುವುದನ್ನು ಗಮನಿಸದೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಶನಿವಾರ ಸುರಿದ ಗಾಳಿಮಳೆಗೆ ಮರವೊಂದು ನಾಮದ ಚಿಲುಮೆಯ ಬಳಿ ರಸ್ತೆಯಲ್ಲಿ ಉರುಳಿ ಬಿದ್ದಿತ್ತು. ಈ ಸುದ್ದಿ ಅರಣ್ಯ ಇಲಾಖೆಯವರ ಗಮನಕ್ಕೆ ಬಂದಿದ್ದರೂ ಮರವನ್ನು ತೆರವು ಗೊಳಿಸದೆ ನಿರ್ಲಕ್ಷ್ಯ ತೋರಿದ್ದಾರೆ. ಸೋಮವಾರ ರಾತ್ರಿ ಮಳೆ ಬರುತ್ತಿದ್ದರಿಂದ ದೂರಕ್ಕೆ ನೋಡಲು ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ. ಆ ವೇಳೆ ಉರುಳಿ ಬಿದ್ದಿದ್ದ ಮರಕ್ಕೆ ಅವಾನಕ್ಕಾಗಿ ಬೈಕ್ ಡಿಕ್ಕಿ ಹೊಡೆದು ಪ್ರಾಣ ಬಿಟ್ಟಿದ್ದಾನೆ. ಈತ ತಂದೆತಾಯಿಗೆ ಒಬ್ಬನೆ ಮಗ. ಇವನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸಾವಿಗೆ ಅರಣ್ಯ ಇಲಾಖೆಯವರೇ ನೇರ ಹೊಣೆ ಹೊರಬೇಕಿದ್ದು, ಮೃತ ಯುವಕನ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು. ಹಾಗೂ ಕರ್ತವ್ಯ ಲೋಪ ಎಸಗಿರುವ ಅರಣ್ಯ ವಲಯಾಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತುಗೊಳಿಸಿ ಕ್ರಮಕೈಗೊಳ್ಳಬೇಕಿದೆ.