ತುಮಕೂರು: ಸತತ ಐದು ಬಾರಿ ಶಾಸಕರಾಗಿ ಆಯ್ಕೆಯಾದ ಗುಬ್ಬಿ ಶಾಸಕ ವಾಸಣ್ಣ ಹಾಗೂ ಮಧುಗಿರಿ ಶಾಸಕರಾದ ಕೆ.ಎನ್.ರಾಜಣ್ಣ ಇಬ್ಬರಿಗೂ ಸೂಕ್ತ ಸಚಿವ ಸ್ಥಾನ ನೀಡಿದಲ್ಲಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಬಲವರ್ಧನೆ ಜೊತೆ ಅಭಿವೃದ್ದಿ ಕಾರ್ಯಗಳು ಜನಮನ ಗೆಲ್ಲಲಿದೆ ಎಂದು ಗುಬ್ಬಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗುಬ್ಬಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆಯ ನಂತರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅಹಿಂದ ಸಮುದಾಯದ ಪ್ರಮುಖ ಮುಖಂಡರಾಗಿ ಗುರುತಿಸಿಕೊಂಡು ಎಲ್ಲಾ ವರ್ಗದ ಜನರ ಶ್ರೆಯೋಭಿವೃದ್ದಿಗೆ ನಿರಂತರ ಕಾಳಜಿ ವಹಿಸಿದ ಈ ಇಬ್ಬರು ಶಾಸಕರು ಸಮಾಜದ ಕಟ್ಟ ಕಡೆಯ ಸಮುದಾಯವನ್ನು ಮುಖ್ಯವಾಹಿನಿಗೆ ತರುವಲ್ಲಿ ತಮ್ಮ ಕಾಳಜಿ ತೋರಿ ರಾಜಕೀಯ ಶಕ್ತಿಯನ್ನು ಹಿಂದುಳಿದ ವರ್ಗಕ್ಕೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅವರಿಬ್ಬರಿಗೂ ಉತ್ತಮ ಖಾತೆ ನೀಡಿ ಕ್ಯಾಬಿನೆಟ್ ಸಚಿವರನ್ನಾಗಿ ಆಯ್ಕೆ ಮಾಡುವಂತೆ ಆಗ್ರಹಿಸಿದರು.
ಗುಬ್ಬಿ ತಾಲ್ಲೂಕು ವಾಲ್ಮೀಕಿ ನಾಯಕ ಸಂಘದ ಗೌರವಾಧ್ಯಕ್ಷ ಎ.ನರಸಿಂಹಮೂರ್ತಿ ಮಾತನಾಡಿ ಗುಬ್ಬಿಯಲ್ಲಿ ಶ್ರೀನಿವಾಸ್ ಪರ ನಿಂತ ನಮ್ಮ ವಾಲ್ಮೀಕಿ ಸಮಾಜ ಅತ್ಯಧಿಕ ಶೇಕಡಾ 85 ರಷ್ಟು ಮತ ನೀಡಿ ಆಯ್ಕೆಗೆ ನಿರ್ಣಾಯಕ ಪಾತ್ರ ವಹಿಸಿದ್ದೇವು. ಕಳೆದ ನಾಲ್ಕು ಬಾರಿ ಶಾಸಕರಾದ ಸಮಯದಲ್ಲಿ ಸಹ ನಾವುಗಳು ಅವರ ಜೊತೆಗೆ ಇದ್ದೇವೆ. ಅದೇ ರೀತಿ ನಮ್ಮ ಸಮಾಜಕ್ಕೆ ರಾಜಕೀಯ ಶಕ್ತಿ ಜೊತೆಗೆ ಅಗತ್ಯ ಕೆಲಸ ಕಾರ್ಯ ಮಾಡಿದ್ದಾರೆ. ಈ ಜೊತೆಗೆ ಕ್ಷೇತ್ರಕ್ಕೆ ಹತ್ತು ಹಲವು ಕಾರ್ಯಕ್ರಮ ಅನುಷ್ಠಾನ ಮಾಡಿದ್ದಾರೆ. ಮಧುಗಿರಿಯಲ್ಲಿ ಅತ್ಯಧಿಕ ಮತಗಳ ಅಂತರದಲ್ಲಿ ಜಯ ಗಳಿಸಿದ ಕೆ.ಎನ್. ರಾಜಣ್ಣನವರು ಸಹ ಅನುಭವಿ ನಾಯಕ. ಈ ಬಾರಿ ಇಬ್ಬರಿಗೂ ಸಚಿವ ಸ್ಥಾನ ನೀಡಿದಲ್ಲಿ ಅವರವರ ಕ್ಷೇತ್ರ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ರಾಮಚಂದ್ರಪ್ಪ ಮಾತನಾಡಿ ರಾಜಣ್ಣ ಅವರು ಸಹಕಾರ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ. ಅವರ ಸೇವೆ ಅಪಾರ. ಈ ನಿಟ್ಟಿನಲ್ಲಿ ಅವರಿಗೆ ಸಹಕಾರ ಸಚಿವ ಸ್ಥಾನ ನೀಡಬೇಕು. ಗುಬ್ಬಿ ಶಾಸಕರಾದ ಶ್ರೀನಿವಾಸ್ ಅವರಿಗೆ ಉತ್ತಮ ಖಾತೆಯ ಮಂತ್ರಿ ಮಾಡಬೇಕು. ಅಹಿಂದ ವರ್ಗಕ್ಕೆ ಇವರಿಬ್ಬರ ಕೊಡುಗೆ ಅಪಾರವಿದೆ ಎಂದರು.
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಭಾಗ್ಯಮ್ಮ ಮಾತನಾಡಿ ಐದು ಬಾರಿ ಶಾಸಕರಾದ ವಾಸಣ್ಣ, ಮೂರು ಬಾರಿ ಶಾಸಕರಾದ ರಾಜಣ್ಣ ಇಬ್ಬರಿಗೂ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡುವುದು ಅರ್ಥಪೂರ್ಣ ಎಂದರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಜಿ.ಎನ್. ಅಡವೀಶಸ್ವಾಮಿ, ಪದಾಧಿಕಾರಿಗಳಾದ ಎಸ್.ಆರ್.ಲಕ್ಷ್ಮಣಪ್ಪ, ಟೆಂಪೋ ನಾಗರಾಜ್, ಡಿ.ದೇವರಾಜ್, ಜಿ.ಎಸ್.ಪ್ರಕಾಶ್, ಕೆ.ನಾಗರಾಜ್, ಮಂಚಲದೊರೆ ರಮೇಶ್, ರಾಘು, ರವೀಶ್, ಎನ್.ಕೆ.ರಂಗನಾಥ್, ಎಂ.ಲಕ್ಷ್ಮಣಪ್ಪ, ಓಬಳೇಶ್ ಇತರರು ಇದ್ದರು.