ತುಮಕೂರು: ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ತುಮಕೂರು, ಮಧುಗಿರಿ, ತಿಪಟೂರು, ಕುಣಿಗಲ್ನ ಮೊರಾರ್ಜಿ ದೇಸಾಯಿ ವಸತಿಶಾಲೆ(ವಸತಿ ಸಹಿತ) ಮತ್ತು ಶಿರಾದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ವಸತಿಶಾಲೆ ಹಾಗೂ ತುಮಕೂರು, ಶಿರಾ, ಮಧುಗಿರಿ, ಪಾವಗಡ, ಗುಬ್ಬಿ, ತುರುವೇಕೆರೆಯ ಮೌಲಾನಾ ಆಜಾದ್ ಮಾದರಿ ಶಾಲೆ(ವಸತಿ ರಹಿತ ಆಂಗ್ಲ ಮಾಧ್ಯಮ)ಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಶೇ.೭೫ರಷ್ಟು ಸ್ಥಾನಗಳನ್ನು ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ(ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ) ಹಾಗೂ ಶೇ.೨೫ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿರಿಸಿದ್ದು, ಅಲ್ಪಸಂಖ್ಯಾತರ ಹಾಗೂ ಇತರೆ ಹಿಂದುಳಿದ ವರ್ಗದ ಕುಟುಂಬದ ವಾರ್ಷಿಕ ಆದಾಯವು 1.00 ಲಕ್ಷ ಮೀರಿರಬಾರದು ಮತ್ತು ಪ್ರವರ್ಗ-1, ಪ.ಜಾ. ಹಾಗೂ ಪರಿಶಿಷ್ಟ ಪಂಗಡದ ಕುಟುಂಬದ ವಾರ್ಷಿಕ ಆದಾಯವು 2.50 ಲಕ್ಷ ರೂ. ಮೀರಿರಬಾರದು.
ಆಸಕ್ತ ೫ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮೇ 13, 2023ರೊಳಗಾಗಿ ಆನ್ಲೈನ್ ಸೇವಾಸಿಂಧು ಪೋರ್ಟಲ್ ಲಿಂಕ್(https://sevasindhuservices.karnataka.gov.in) ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೌಲಾನಾ ಅಜಾದ್ ಭವನ, ಇಂದಿರಾ ಕಾಲೇಜು ಮುಂಭಾಗ, ಉಪ್ಪಾರಹಳ್ಳಿ, ತುಮಕೂರು, ದೂ.ವಾ.ಸಂ. 0816-2273724ನ್ನು ಸಂಪರ್ಕಿಸಬಹುದಾಗಿದೆ.