ತುಮಕೂರು: ಸಾರ್ವಜನಿಕರಿಗೆ ವಿತರಿಸಲಾಗುತ್ತಿರುವ ಪಡಿತರ ಅಕ್ಕಿಯಲ್ಲಿ ಕೃತಕ ಪ್ಲಾಸ್ಟಿಕ್ ಅಕ್ಕಿ ಬೆರಕೆಯಾಗುತ್ತಿದ್ದು, ಪಡಿತರ ಫಲಾನುಭವಿಗಳು ಆತಂಕಕ್ಕಿಡಾಗಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಪಡಿತರ ವಿತರಿಸಲು ತೆರೆದಿರುವ ಪಡಿತರ ಕೇಂದ್ರ ಹಾಗೂ ವಿಎಸ್ಎಸ್ ಸಹಾಭಾಗಿತ್ವದಲ್ಲಿ ಹೊಂದಿರುವ ಪಡಿತರ ಕೇಂದ್ರದಲ್ಲಿ ಸಾರ್ವಜನಿಕರಿಗೆ ಅಕ್ಕಿ ವಿತರಿಸಲಾಗುತ್ತಿದೆ. ಇತ್ತೀಚೆಗೆ ವಿತರಿಸಲಾಗುತ್ತಿರುವ ಅಕ್ಕಿಯಲ್ಲಿ ಕೃತಕವಾಗಿ ತಯಾರಿಸಿರುವ ಪ್ಲಾಸ್ಟಿಕ್ ಅಕ್ಕಿ ಬೆರಕೆಯಾಗಿರುವುದು ಕಂಡು ಬಂದಿದೆ.
ಅಕ್ಕಿಯೊಂದಿಗೆ ಪ್ಲಾಸ್ಟಿಕ್ ಬಳಸಿ ಅಕ್ಕಿಯನ್ನು ಕಲಬೆರಕೆ ಮಾಡುತ್ತಿರುವ ಜಾಲಗಳ ಪತ್ತೆಗೆ ಇಲಾಖೆ ಹಾಗೂ ಸರಕಾರ ವಿಫಲವಾಗಿದೆ. ಕಲಬೆರಕೆ ಅಕ್ಕಿ ವಿತರಣೆಯಿಂದ ಜಿಲ್ಲೆಯ ಪಡಿತರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದಾರೆ.
ಪ್ರಕರಣ ಪತ್ತೆ: ತುಮಕೂರು ತಾಲೂಕಿನ ಕೆಸ್ತೂರು ಗ್ರಾಮದ ವಿಎಸ್ಎಸ್ ಕೇಂದ್ರದಲ್ಲಿ ವಿತರಿಸಲಾಗಿದ್ದ ಪಡಿತರ ಅಕ್ಕಿಯಲ್ಲಿ ಅಪಾರ ಪ್ರಮಾಣದ ಕೃತಕ ಪ್ಲಾಸ್ಟಿಕ್ ಅಕ್ಕಿ ದೊರೆತಿದೆ. ಕುಟುಂಬದ ಮಹಿಳೆಯರು ಪ್ಲಾಸ್ಟಿಕ್ ಅಕ್ಕಿ ವಿಂಗಡಿಸಿ ಸಾಮಾಜಿಕ ಜಾಲಾ ತಾಣಗಳಲ್ಲಿ ಹರಿಬಿಟ್ಟಿದ್ದಾರೆ.