ತುಮಕೂರು: ವಿಧಾನ ಸಭಾ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿದ ಅಧಿಕಾರಿ,ಸಿಬ್ಬಂದಿಗಳು ಅಂಚೆ ಮೂಲಕ ಮತದಾನ ಮಾಡಲು ಅನುವಾಗುವಂತೆ ಮೇ ೩ರಂದು ಫೆಸಿಲಿಟೇಶನ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿಂದು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಮಾತನಾಡಿದ ಅವರು, ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾದವರಿಗೆ ಮೇ ೩ರಂದು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ೨ನೇ ಹಂತದ ತರಬೇತಿಯನ್ನು ಆಯೋಜಿಸಲಾಗಿದ್ದು, ತರಬೇತಿ ಕೇಂದ್ರದಲ್ಲಿ ಫೆಸಿಲಿಟೇಶನ್ ಸೆಂಟರ್ ಅನ್ನು ಸ್ಥಾಪಿಸಲಾಗುವುದು. ಚುನಾವಣಾ ಕಾರ್ಯಕ್ಕಾಗಿ ನಿಯೋಜಿಸಿರುವ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ತಪ್ಪದೇ ಮೇ ೩ರಂದು ಫೆಸಿಲಿಟೇಶನ್ ಸೆಂಟರ್ನಲ್ಲಿ ಅಂಚೆ ಮತದಾನ ಮಾಡಬೇಕು ಎಂದು ಅವರು ಸೂಚನೆ ನೀಡಿದರು.
ತರಬೇತಿ ದಿನದಂದು ಆಯಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗುವ ವೋಟರ್ ಫೆಸಿಲಿಟೇ?ನ್ ಸೆಂಟರ್ಗೆ ಒಬ್ಬ ಗ್ರೇಡ್-೨ ತಹಶೀಲ್ದಾರರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಬೇಕು. ಫೆಸಿಲಿಟೇಶನ್ ಕೇಂದ್ರದಲ್ಲಿ ಒಬ್ಬ ವಿಡಿಯೋಗ್ರಾಫರ್ ಹಾಗೂ ಅವಶ್ಯಕ ಸಿಬ್ಬಂದಿ, ಲೇಖನ ಸಾಮಗ್ರಿಗಳನ್ನು ಒದಗಿಸಬೇಕು. ಪ್ರತಿಯೊಂದು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳಿಗೆ ಫೆಸಿಲಿಟೇಶನ್ ಕೇಂದ್ರ ಸ್ಥಾಪಿಸಿದ ಬಗ್ಗೆ ಮಾಹಿತಿ ನೀಡಬೇಕು. ಚುನಾವಣಾ ಅಭ್ಯರ್ಥಿಗಳಿಂದ ನಿಯೋಜಿತರಾದ ವ್ಯಕ್ತಿಗಳು ಫೆಸಿಲಿಟೇಶನ್ ಸೆಂಟರ್ನಲ್ಲಿ ಅಂಚೆ ಮತದಾನ ವಿಧಾನವನ್ನು ಪರಿಶೀಲಿಸಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕು. ಫೆಸಿಲಿಟೇಶನ್ ಕೇಂದ್ರದಲ್ಲಿ ಮತದಾನದ ರಹಸ್ಯವನ್ನು ಕಾಪಾಡಿಕೊಳ್ಳುವಂತೆ ವೋಟರ್ ಕಂಪಾಟ್ಮೆಂಟ್ ವ್ಯವಸ್ಥೆ ಮಾಡಬೇಕು. ನಿಗಧಿತ ಅವಧಿಯೊಳಗೆ ಎಲ್ಲಾ ಚುನಾವಣಾ ಕರ್ತವ್ಯ ನಿಯೋಜಿತ ಸಿಬ್ಬಂದಿಗಳು ಮತ ಚಲಾಯಿಸಿದ ನಂತರ ನಿಯಮಾನುಸಾರ ಅಂಚೆ ಮತಪತ್ರಗಳನ್ನು ವಿಧಾನಸಭಾ ಕ್ಷೇತ್ರವಾರು ವಿಂಗಡಿಸಿ ಸೀಲ್ ಮಾಡಿದ ಲಕೋಟೆಯಲ್ಲಿಟ್ಟು ಸಂಬಂಧಿಸಿದ ಚುನಾವಣಾಧಿಕಾರಿಗಳಿಗೆ ತಲುಪಿಸಬೇಕು. ತರಬೇತಿ ಕೇಂದ್ರದಲ್ಲಿ ಅಂಚೆ ಮತಪತ್ರ ಸ್ವೀಕರಿಸಲು ಸಾಧ್ಯವಾಗದ ಮತದಾರರ ವಿಳಾಸಕ್ಕೆ ಮೇ ೪ರಂದು ಕಡ್ಡಾಯವಾಗಿ ನೋಂದಾಯಿತ ಅಂಚೆ ಮೂಲಕ ಅಂಚೆ ಮತಪತ್ರವನ್ನು ಕಳುಹಿಸಬೇಕು ಎಂದು ತಿಳಿಸಿದರು.
ಫೆಸಿಲಿಟೇಶನ್ ಕೇಂದ್ರದಲ್ಲಿ ಗೌಪ್ಯತೆ ಕಾಪಾಡಿಕೊಂಡು ಅಂಚೆ ಮತ ಪತ್ರಗಳನ್ನು ಹಾಕಲು ದೊಡ್ಡ ಸ್ಟೀಲ್ ಟ್ರಂಕನ್ನು ಇಡಬೇಕು. ಈ ಟ್ರಂಕಿನ ವ್ಯವಸ್ಥೆಯನ್ನು ಮೇ ೯ರಂದು ನಡೆಯಲಿರುವ ಮಸ್ಟರಿಂಗ್ ಕೇಂದ್ರದಲ್ಲಿಯೂ ಮಾಡಬೇಕು ಎಂದರಲ್ಲದೆ, ಮೇ ೩ರಂದು ವ್ಯವಸ್ಥೆ ಮಾಡಿದಂತೆ ಮಸ್ಟರಿಂಗ್ ಕೇಂದ್ರದಲ್ಲಿಯೂ ಅಂಚೆ ಮತದಾನ ಮಾಡಲು ವ್ಯವಸ್ಥೆ ಮಾಡಬೇಕು. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದವರು ಮೇ ೯ರಂದು ನಡೆಯುವ ಮಸ್ಟರಿಂಗ್ ಕೇಂದ್ರದಲ್ಲಿ ಅಂಚೆ ಮತದಾನ ಮಾಡತಕ್ಕದ್ದು. ತರಬೇತಿ ದಿನದಂದು ಹಾಗೂ ಮಸ್ಟರಿಂಗ್ ದಿನದಂದು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸದಿರುವ ಚುನಾವಣಾ ಸಿಬ್ಬಂದಿಗಳು ನೋಂದಾಯಿತ ಅಂಚೆ ಮೂಲಕ ತಮ್ಮ ಮತಪತ್ರವನ್ನು ಕಳುಹಿಸಬೇಕು ಎಂದು ತಿಳಿಸಿದರಲ್ಲದೆ, ಬೇರೆ ಜಿಲ್ಲೆಯಲ್ಲಿರುವ ಚುನಾವಣಾ ಸಿಬ್ಬಂದಿಗಳಿಗೆ ಅಂಚೆ ಮತಪತ್ರವನ್ನು ನೇರವಾಗಿ ನೋಂದಾಯಿತ ಅಂಚೆ ಮೂಲಕ ಯಾವುದೇ ರೀತಿಯಲ್ಲಿ ವಿಳಂಬ ಮಾಡದೆ ಕಳುಹಿಸಬೇಕು ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಮತ ಚಲಾಯಿಸುವ ಸಿಬ್ಬಂದಿಗಳ ಹೆಸರು ಮತ್ತು ವಿಳಾಸದ ಮಾಹಿತಿಯನ್ನು ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳಿಗೆ ನೀಡಬಾರದು ಎಂದು ತಿಳಿಸಿದರಲ್ಲದೆ, ಮತದಾನದ ದಿನ ನಿಯೋಜನೆ ಮಾಡಿದ ಸಿಬ್ಬಂದಿಗಳೊಂದಿಗೆ ಮೈಕ್ರೋ ಅಬ್ಸರ್ವರ್ಗಳು, ಸೆಕ್ಟರ್ ಅಧಿಕಾರಿಗಳು, ಲೈಸನ್ ಅಧಿಕಾರಿಗಳು ಹಾಗೂ ಇತರೆ ಎಲ್ಲ ಅಧಿಕಾರಿ/ಸಿಬ್ಬಂದಿಗಳು ಕಡ್ಡಾಯವಾಗಿ ಅಂಚೆ ಮತದಾನ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಪಾಲಿಕೆ ಆಯುಕ್ತ ನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ದರ್ಶನ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ ಕರಾಳೆ, ಉಪ ವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸುಜಯ್, ತಹಶೀಲ್ದಾರ್ ಸಿದ್ದೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.