ಬೀದರ್ : ಮೋದಿ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆ ಎಂದು ಹೇಳಿದ್ದರು . ಆದರೆ , ಅವರಿಂದ ಆಗಲಿಲ್ಲ . ನಾನು ಅವರಂತೆ ಸುಳ್ಳು ಮಾತುಗಳನ್ನು ಹೇಳುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ . ಬೀದರ್ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಪಂಚರತ್ನ ರಥಯಾತ್ರೆಯ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು , ” ರಾಜ್ಯ ಸರ್ಕಾರ ತೆರಿಗೆ ಹಣದ ಲೂಟಿ ಮಾಡುತ್ತಿದೆ . ಅಂತಹ ದುಡ್ಡನ್ನು ಉಳಿಸುವ ಕೆಲಸ ಮಾಡುತ್ತೇನೆ ‘ ಎಂದು ಹೇಳಿದರು .
” ಇಬ್ಬರು ಮಕ್ಕಳೊಂದಿಗೆ ತಂದೆ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿರುವುದನ್ನು ಪತ್ರಿಕೆಯಲ್ಲಿ ಓದಿದ್ದೇನೆ . ಸಂತ್ರಸ್ತ ಕುಟುಂಬ ಮತ್ತು ಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗಿದೆ . ಶಿಕ್ಷಣ , ಆರೋಗ್ಯ , ಕೃಷಿ , ಉದ್ಯೋಗ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಾಕಷ್ಟು ಯೋಜನೆಗಳನ್ನು ತರುವ ಉದ್ದೇಶದಿಂದ ಪಂಚರತ್ನ ಕಾರ್ಯಕ್ರಮ ಆರಂಭಿಸಿದ್ದೇನೆ ‘ ಎಂದು ತಿಳಿಸಿದರು . ” ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತಂದರೆ ಎಲ್ಲ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ ” ಎಂದು ಭರವಸೆ ನೀಡಿದರು.
ಸಂಕಷ್ಟದಲ್ಲಿ ರಾಜ್ಯದ ರೈತರು ” ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ನಾಶವಾಗಿದೆ . ಅಂತವರಿಗೆ ಪರಿಹಾರ ಒದಗಿಸುವ ಕೆಲಸವಾಗುತ್ತಿಲ್ಲ . ನಾವು ಅಧಿಕಾರಕ್ಕೆ ಬಂದರೆ ಬಿತ್ತನೆ ಬೀಜವಷ್ಟೆ ಅಲ್ಲ , ರಸಗೊಬ್ಬರದ ಖರ್ಚು ವೆಚ್ಚವನ್ನು ಭರಿಸುತ್ತೇವೆ . ಭೂಮಿ , ಆದಾಯವಿಲ್ಲದವರಿಗೂ ಸರ್ಕಾರದಿಂದ ಬಡ್ಡಿ ರಹಿತ ಸಹಾಯಧನವನ್ನು ಮನೆಯ ಬಾಗಿಲಿಗೆ ತಲುಪಿಸುತ್ತೇವೆ ‘ ಎಂದು ಹೇಳಿದರು .
ಭರವಸೆ ನೀಡಿದ ಕೆಲಸ ಮಾಡದಿದ್ದರೆ ಪಕ್ಷ ವಿಸರ್ಜನೆ ” ನಾವು ಅಧಿಕಾರಕ್ಕೆ ಬಂದರೆ , ಅಧಿಕಾರಾವಧಿಯ ಐದು ವರ್ಷಗಳಲ್ಲಿ ಭರವಸೆ ನೀಡಿದ ಎಲ್ಲ ಕೆಲಸ ಮಾಡದಿದ್ದರೆ 2028 ರೊಳಗೆ ನಮ್ಮ ಪಕ್ಷವನ್ನು ವಿಸರ್ಜನೆ ಮಾಡುತ್ತೇನೆ . ತಾವು ನನ್ನ ಮೇಲೆ ನಂಬಿಕೆ ಇಟ್ಟು ನಮ್ಮನ್ನು ಒಂದು ಬಾರಿ ಐದು ವರ್ಷಗಳ ಕಾಲ ಅಧಿಕಾರದಲ್ಲಿರುವಂತೆ ಮಾಡಬೇಕು . ರಾಜ್ಯದ ಒಳಿತಿಗಾಗಿ ನಮಗೆ ಅವಕಾಶ ನೀಡಬೇಕು ‘ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದರು . ಹುಮನಾಬಾದ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂ ಫೈಜ್ ಮಾತನಾಡಿ , ” ಹುಮನಾಬಾದ್ ತಾಲೂಕಿನ ಗ್ರಾಮೀಣ ಭಾಗದಲ್ಲಿ ಈಗಿನ ಶಾಸಕರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ .
ಮಿರಾಜುದ್ದೀನ್ ಪಟೇಲ್ ಅವರ ಕಾಲದಲ್ಲಿ ಆಗಿರುವ ಅಭಿವೃದ್ಧಿ ಹೊರತುಪಡಿಸಿದರೆ ಅದರ ಬಳಿಕ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ ” ಎಂದು ಆರೋಪಿಸಿದರು . ಸಮಾವೇಶದಲ್ಲಿ ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಖಾಶೆಂಪೂರ್ , ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪೂರ್ , ತಿಪ್ಪೇಸ್ವಾಮಿ , ಬೋಜೇಗೌಡ , ರಮೇಶ್ ಗೌಡ , ಗೌತಮ್ ಸಾಗರ್ , ಸುರೇಶ್ ಸಿಗಿ , ಅರ್ಷದ್ ಪಟೇಲ್ , ಮಹೇಶ್ ಅಗಡಿ , ಬಾಬುರಾವ್ ಪಾಟೀಲ್ , ದಸ್ತಗಿರಿ , ದೇವೆಂದ್ರ ಸೋನಿ , ಲಲಿತಾ , ಉಬೇದುಲ್ಲಾ ಖಾನ್ ಅಜ್ಜಿ ರೇಖಾ , ಡಾ.ಕಿಶೋರ್ , ತನುಜಾ , ಚೇತನ್ ಗೋಕುಲೆ , ಶಿವಶರಣಪ್ಪ ಶಿವಪುತ್ರ ಮಾಳೆ , ಅಶೋಕ್ , ಸೈಯದ್ ರಸೀದ್ ಪಟೇಲ್ ಮತ್ತಿತರರು ಉಪಸ್ಥಿತರಿದ್ದರು .