ಬೀದರ್, ಮಾ.31: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಲಾಗುತ್ತಿರುವ 1504 ಮತದಾನ ಕೇಂದ್ರಗಳ ಪೈಕಿ 348 ಆಪತ್ತು ಜನಕ ಹಾಗೂ ಮತದಾನಕ್ಕೆ ಆಗಮಿಸಲು ಮತದಾರ ಹೆದರಿಕೆ ಪಡುವಂತಹ 24 ಮತದಾನ ಕೇಂದ್ರಗಳನ್ನು ದುರ್ಬಲ ಎಂದು ಗುರುತಿಸಲಾಗಿದ್ದು ಸೂಕ್ತ ಹೆಚ್ಚುವರಿ ಪೊಲೀಸ್ ಬಂದೋಬಸ್್ತ ಮೂಲಕ ಮತದಾರರು ನಿರ್ಭಯವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್ಎಲ್ ತಿಳಿಸಿದರು.
ಅವರು ಚುನಾವಣೆ ಘೋಷಣೆಯಾದ ಪ್ರಯುಕ್ತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಇಲಾಖೆ ಸಜ್ಜಾಗಿದೆ. ಚುನಾವಣೆ ಸಂದರ್ಭ ಗದ್ದಲ, ಗೊಂದಲ ಸೃಷ್ಟಿಸುವ ಹಿನ್ನೆಲೆಯುಳ್ಳ 492 ಜನರ ವಿರುದ್ಧ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಅಲ್ಲದೆ ಇನ್ನೂ 617 ಜನರ ಮೇಲೆ ನಿಗಾವಹಿಸಿ ಈ ಪೈಕಿ 561 ಜನರಿಂದ ಶಾಂತಿಯುತ ವರ್ತನೆಯ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮೂರು ಜನರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೆ ಜಿಲ್ಲಾಡಳಿತಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಈ ಪೈಕಿ ಇಬ್ಬರ ವಿರುದ್ಧ ಕ್ರಮವಾಗಿದ್ದು ಇನ್ನೊಬ್ಬರ ಕಡತ ಜಿಲ್ಲಾಡಳಿತದ ಹಂತದಲ್ಲಿದೆ.
ಇನ್ನು 11 ಜನರನ್ನು ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಸಲ್ಲಿಸಿದ ವರದಿಯಂತೆ ಇಬ್ಬರ ಗಡಿಪಾರಿಗೆ ಆದೇಶವಾಗಿದ್ದು ಇನ್ನೂ 9 ಜನರ ವಿರುದ್ಧ ಆದೇಶವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸ್ಥಾಪಿಸಲಾಗಿರುವ 38 ಚೆಕ್ಪೋಸ್ಟ್ಗಳಲ್ಲಿ ಅಗತ್ಯ ಸೌಲಭ್ಯಗಳನ್ನ ಕಲ್ಪಿಸಲಾಗಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುವ ಚೆಕ್ಪೋಸ್ಟ್ಗಳಿಗೆ ಬಹುಮಾನ ನೀಡಲಾಗುತ್ತದೆ. ಅಲ್ಲದೆ ಚೆಕ್ಪೋಸ್ಟ್ಗಳ ಕಾರ್ಯನಿರ್ವಹಣೆ ಗಮನಿಸಲು ಪ್ರತಿಯೊಂದು ಕಡೆ ತಲಾ 2 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಮಾತನಾಡಿ, ಜಿಲ್ಲೆಯಾದ್ಯಂತ 2 ಕಡೆಗಳಲ್ಲಿ ದಾಖಲೆಗಳಿಲ್ಲದೆ ಸಾಗಿಸಲಾಗುತ್ತಿದ್ದ 10,87,210ರು. ನಗದು, 7,68,122ರು. ಮೌಲ್ಯದ 5272.08ಲೀ. ಮದ್ಯ, 70,67,73,200ರು. ಮೌಲ್ಯದ 119,564ಕೆಜಿ ಗಾಂಜಾ ಮತ್ತು 220 ತಂಬಾಕು ಬ್ಯಾಗ್ಗಳನ್ನು ಅಲ್ಲದೆ 1,92,750ರು, ಮೌಲ್ಯದ 3411ಸೀರೆಗಳು ಸೇರಿದಂತೆ ಒಟ್ಟು 91,15,814ರು. ಮೌಲ್ಯದ ನಗದು ಹಾಗೂ ವಸ್ತುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.