ಬೀದರ್: ‘ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಅವರ ಬಿಜೆಪಿಯ ಬಿ ತಂಡ ಚುನಾವಣೆಯಲ್ಲಿ ನನ್ನನ್ನು ಪರಾಭವಗೊಳಿಸಲು ಪ್ರಯತ್ನಿಸಿತು’ ಎಂದು ಔರಾದ್ನ ಬಿಜೆಪಿಯ ವಿಜೇತ ಅಭ್ಯರ್ಥಿ ಪ್ರಭು ಚವ್ಹಾಣ ಆರೋಪಿಸಿದರು.
‘ಖೂಬಾ ಅವರು ತಂಡಕ್ಕೆ ಹಣಕಾಸು ನೆರವು ನೀಡಿ ಪಕ್ಷ ದ್ರೋಹದ ಕೆಲಸ ಮಾಡಿದ್ದಾರೆ. ನನಗೆ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಔರಾದ್ ತಾಲ್ಲೂಕಿನಲ್ಲಿ ಸಿಪೆಟ್ಗೆ ಭೂಮಿ ಪೂಜೆ ನೆರವೇರಿಸಿದರೂ, ಇದುವರೆಗೆ ಕಾಮಗಾರಿ ಶುರು ಮಾಡಿಲ್ಲ’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
‘ಬೀದರ್-ಕಮಲನಗರ ಮಧ್ಯೆ ನಿರ್ಮಿಸಿರುವ ಹೆದ್ದಾರಿಯು ಮೂರೇ ವರ್ಷಗಳಲ್ಲಿ ಬಿರುಕು ಬಿಟ್ಟಿದೆ. ಖೂಬಾ ಅವಧಿಯಲ್ಲಿ ನಿರ್ಮಿಸಿದ ರಸ್ತೆ ದುರಸ್ತಿಗೆ ಬಂದಿದೆ. ಖೂಬಾ ಅವರು ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಅಡ್ಡಗಾಲು ಹಾಕಿದರು. ಅಧಿಕಾರಿಗಳ ಮೇಲೆ ಒತ್ತಡ ತಂದು ಜಲ ಜೀವನ ಮಿಷನ್ ಕಾಮಗಾರಿಗೆ ಪದೇ ಪದೇ ಟೆಂಡರ್ ಕರೆಯುವಂತೆ ಮಾಡಿದರು’ ಎಂದು ಅವರು ತಿಳಿಸಿದರು.
‘ಭಗವಂತ ಖೂಬಾ ಹಾಗೂ ಅವರ ತಂಡದಿಂದ ನನಗೆ ಜೀವ ಭಯವಿದ್ದು, ಇದರ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸುವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವರ ಗಮನಕ್ಕೂ ತರುವೆ’ ಎಂದು ಅವರು ತಿಳಿಸಿದರು.
ಮುಖಂಡರಾದ ಶಿವಾಜಿರಾವ್ ಕಾಳೆ, ಅರಹಂತ ಸಾವಳೆ, ಕಿರಣ ಪಾಟೀಲ, ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಸುರೇಶ ಭೋಸ್ಲೆ, ರಮೇಶ ಬಿರಾದಾರ, ಗಿರಿಶ್ ಒಡೆಯರ್, ಶಿವಕುಮಾರ ಪಾಂಚಾಳ್, ನರಸಿಂಗ್ ಮೇತ್ರೆ, ರಮೇಶ ಉಪಾಸೆ, ಬಾಬುರಾವ್ ತೋರ್ಣಾವಾಡಿ ಇದ್ದರು.
ಪ್ರತಿಕ್ರಿಯೆಗಾಗಿ ಸಂಪರ್ಕಿಸಲು ಪ್ರಯತ್ನಿಸಿದರೂ ಭಗವಂತ ಖೂಬಾ ಅವರು ಲಭ್ಯವಾಗಲಿಲ್ಲ
ಚುನಾವಣೆಯಲ್ಲಿ ಸೋಲಿಸಲು ತೀವ್ರ ಪ್ರಯತ್ನ ಕೇಂದ್ರ ಸಚಿವರಿಂದ ತಂಡಕ್ಕೆ ಹಣಕಾಸು ನೆರವು: ಆಪಾದನೆ ರಾಜ್ಯ ಸರ್ಕಾರದ ಕಾಮಗಾರಿಗಳಿಗೆ ಅಡ್ಡಗಾಲು