ಬೀದರ್ (ಮೇ.04): ಕಾಂಗ್ರೆಸ್ ನವ್ರು ಈ ಹಿಂದೆ ಐದು ವರ್ಷ ಸರ್ಕಾರ ನಡೆಸಿದ್ದರು. ಬಿಜೆಪಿಯವ್ರು ನಾಲ್ಕು ವರ್ಷ ಸರ್ಕಾರ ನಡೆಸಿದ್ದಾರೆ. ಆದ್ರೆ ನಾಡಿಗೆ ಒಳಿತಾಗುವ ಮಹತ್ವದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಅವ್ರು ನೀಡಿಲ್ಲ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರು, ಜೆಡಿಎಸ್ ಅಭ್ಯರ್ಥಿಯಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕಾಂಗ್ರೆಸ್, ಬಿಜೆಪಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಠಲಪೂರ, ಮೀನಕೇರಾ, ಮೊಗದಾಳ (ಮಗ್ದಳ್), ಬೈರನಳ್ಳಿ, ಔರಾದ್ ಎಸ್, ಖಾಶೆಂಪುರ್ ಸಿ ಸೇರಿದಂತೆ ವಿವಿಧೆಡೆ ಬುಧವಾರ ಸಂಜೆ ಮತಯಾಚನಾ ಯಾತ್ರೆ (ಚುನಾವಣಾ ಪ್ರಚಾರ) ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೆಲ್ಲಾ ನಾವು ಅನೇಕ ಮಹತ್ವದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ನೀಡುವ ಕೆಲಸ ಮಾಡಿದ್ದೇವೆ ಎಂದರು.
ಸಮ್ಮಿಶ್ರ ಸರ್ಕಾರಗಳ ಸಂದರ್ಭದಲ್ಲಿ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡು ಸರ್ಕಾರ ರಚಿಸಿದ್ದವರ ವಿರೋಧದ ನಡುವೆಯೂ ರೈತರ ಸಾಲಮನ್ನಾ ಮಾಡಿದ್ದೇವೆ. ರೈತರ, ಶ್ರಮಿಕರ, ಬಡವರ ಒಳಿತಿಗಾಗಿ ನಾವು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಅಧಿಕಾರಕ್ಕೆ ಬಂದ ತಕ್ಷಣವೇ ಇನ್ನೂ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೆ ತರಲಿದ್ದೇವೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ಮತ್ತೊಮ್ಮೆ ಜಾತ್ಯಾತೀತ ಜನತಾದಳ ಪಕ್ಷಕ್ಕೆ ಆಶೀರ್ವಾದ ನೀಡಬೇಕು. ಹೆಚ್ಚಿನ ಬಹುಮತದೊಂದಿಗೆ ನನ್ನನ್ನು ಗೆಲ್ಲಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದರು. ಪ್ರಚಾರದ ನಡುವೆ ಶಾಸಕರು, ಗ್ರಾಮಗಳ ಮಂದಿರ, ದರ್ಗಾ, ಚರ್ಚ್ ಗಳಿಗೆ ಭೇಟಿ ನೀಡಿ ಪೂಜೆ, ಪ್ರಾರ್ಥನೆ ಸಲ್ಲಿಸಿ, ಮಹಾತ್ಮರ ಪುತ್ಥಳಿ, ಪ್ರತಿಮೆ, ಪೋಟೋಗಳಿಗೆ ಮಾಲಾರ್ಪಣೆ ಮಾಡಿದರು. ವಿಠಲಪೂರ ಗ್ರಾಮದಲ್ಲಿ ಬಿಜೆಪಿಯ ಸಾಯಿರೆಡ್ಡಿ ಮತ್ತು ಬಳಗದವರು ವಿವಿಧೆಡೆ ಅನೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.