ಬೀದರ್: ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ರಾಜಕೀಯ ಲೆಕ್ಕಾಚಾರಗಳು ಬುಡ ಮೇಲಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡರೆ, ಜಿಲ್ಲೆಯಲ್ಲಿ 2018ರ ಚುನಾವಣೆ ನಂತರ ಎರಡು ಸ್ಥಾನ ಕಳೆದುಕೊಂಡಿದೆ. ಬಿಜೆಪಿ ರಾಜ್ಯದಲ್ಲಿ ಹಿನ್ನಡೆ ಅನುಭವಿಸಿದರೂ ಜಿಲ್ಲೆಯಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ.
ಹುಮನಾಬಾದ್ ಗೌಡರ ಕುಟುಂಬದ ಒಡಕಿನ ಲಾಭ ಪಡೆದು ಸೋದರ ಸಂಬಂಧಿಯನ್ನೇ ಕಣಕ್ಕಿಸಿ ನಡೆಸಿದ ತಂತ್ರಗಾರಿಕೆಯಲ್ಲಿ ಬಿಜೆಪಿ ಯಶ ಸಾಧಿಸಿದೆ. ಕ್ಷೇತ್ರದಲ್ಲಿ ಮೋದಿ ನಡೆಸಿದ ಪ್ರಚಾರ ಹಾಗೂ ಜೆಡಿಎಸ್ ಅಭ್ಯರ್ಥಿ ಸಿ.ಎಂ.ಫೈಜ್ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ವಿಭಜನೆಯಾದದ್ದೂ ಬಿಜೆಪಿ ಗೆಲುವಿಗೆ ನೆರವಾಗಿವೆ.
ಬಿಜೆಪಿಯ ಸಿದ್ದು ಪಾಟೀಲ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಕಾಂಗ್ರೆಸ್ನ ರಾಜಶೇಖರ ಪಾಟೀಲ ವಿಧಾನ ಪರಿಷತ್ ಸದಸ್ಯರಾಗಿರುವ ತನ್ನ ಇಬ್ಬರು ಸಹೋದರರಾದ ಚಂದ್ರಶೇಖರ ಪಾಟೀಲ ಹಾಗೂ ಭೀಮರಾವ್ ಪಾಟೀಲ ಜತೆ ಸೇರಿ ಸಂಘಟಿತ ಪ್ರಯತ್ನ ನಡೆಸಿದರೂ ಗೆಲುವು ಸಾಧ್ಯವಾಗಲಿಲ್ಲ.
ಬೀದರ್ ಕ್ಷೇತ್ರದಲ್ಲಿ ಮುಖಂಡರು ಧರ್ಮ ಹಾಗೂ ಜಾತಿ ಆಧಾರಿತ ಚುನಾವಣೆ ನಡೆಸಲು ಪ್ರಯತ್ನಿಸಿದರೂ ಮತದಾರರು ಸೊಪ್ಪು ಹಾಕಿಲ್ಲ. ಕೋಮು ಸೌಹಾರ್ದತೆ ಬೀದರ್ ನೆಲಗುಣ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.
ಬೀದರ್ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇರುವ ಕಾರಣ ಸಹಜವಾಗಿಯೇ ಜೆಡಿಎಸ್ನ ಸೂರ್ಯಕಾಂತ ನಾಗಮಾರಪಳ್ಳಿ ಆಯ್ಕೆಯಾಗಲಿದ್ದಾರೆ ಎಂದು ರಾಜಕೀಯ ಮುಖಂಡರು ಆಡಿಕೊಳ್ಳುತ್ತಿದ್ದರು. ಆದರೆ, ಕೆಲವರು ಸೂರ್ಯಕಾಂತ ಬಿಜೆಪಿಯಲ್ಲಿ ಇದ್ದಾಗ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿದ್ದನ್ನು ವೈರಲ್ ಮಾಡಿದ್ದರು. ಅವರನ್ನೂ ಬಿಜೆಪಿ ಮೈಂಡ್ಸೆಟ್ನಿಂದ ಹೊರ ತರುವುದು ಕಷ್ಟವಾಗಲಿದೆ ಎಂದು ಅರಿತ ಅಲ್ಪಸಂಖ್ಯಾತರು ಸೂರ್ಯಕಾಂತ ಅವರಿಂದ ಅಂತರ ಕಾಯ್ದುಕೊಂಡರು. ಇದು ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತು.
ಬಿಜೆಪಿಯ ಈಶ್ವರಸಿಂಗ್ ಠಾಕೂರ್ ನಿರೀಕ್ಷೆಯಂತೆ ಸೋಲು ಅನುಭವಿಸಿದ್ದಾರೆ. ಬಸವರಾಜ ಪಾಟೀಲ ಯತ್ನಾಳ ಸೇರಿದಂತೆ ಅನೇಕ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿದರೂ ರಹೀಂ ಖಾನ್ ಅದಕ್ಕೆ ಪ್ರತಿಕ್ರಿಯೆ ಕೊಡುವ ಗೋಜಿಗೂ ಹೋಗದೆ ಜಾಣತನ ಮೆರೆದಿದ್ದರು. ಇದು ಅವರಿಗೆ ಪ್ಲಸ್ ಪಾಯಿಂಟ್ ಆಯಿತು. ಜೆಡಿಎಸ್, ಬಿಜೆಪಿ ಪ್ರಬಲ ಪೈಪೋಟಿ ಮಧ್ಯೆಯೂ ಖಾನ್ ನಾಲ್ಕನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.