News Kannada
Monday, December 11 2023
ಬೀದರ್

ಸಾಹುಕಾರ ಮನಃಸ್ಥಿತಿಯವರ ಕೈಗೆ ಡಿಸಿಸಿ ಬ್ಯಾಂಕ್‌ ಕೊಡಬೇಡಿ: ಭಗವಂತ ಖೂಬಾ

Don't give DCC bank into hands of sahukar mentality: Bhagwant Khuba
Photo Credit : News Kannada

ಬೀದರ್: ಸಾಹುಕಾರ ಮನಃಸ್ಥಿತಿಯ ವ್ಯಕ್ತಿಯ ಕೈಗೆ ಬೀದರ್‌ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಅಥವಾ ಸಹಕಾರ ಕ್ಷೇತ್ರ ಹೋದರೆ ಈ ಕ್ಷೇತ್ರವು ಬಂಡವಾಳಷಾಹಿ ಕ್ಷೇತ್ರವಾಗಿ ಬದಲಾಗುವ ಆತಂಕವಿದೆ’ ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ತಿಳಿಸಿದರು.

ಹಣದ ಪ್ರಭಾವದಿಂದ ಸ್ವಾರ್ಥ ಸಾಧನೆಗಾಗಿ ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯುವಂತೆ ಮಾಡಲಾಗಿದೆ. ‘ಡೆಲಿಗೇಟ್’ ಸದಸ್ಯರಿಗೆ ಹಣದ ಆಮಿಷ ಒಡ್ಡಲಾಗುತ್ತಿದೆ. ಅನೇಕ ಮತದಾರರು ತೀರ್ಥಯಾತ್ರೆಗೆ ಹೋಗಿದ್ದಾರೆ. ‘ಡೆಲಿಗೇಟ್’ ಮತದಾರರು ಹಣದ ಆಮಿಷಕ್ಕೆ ಒಳಗಾಗಬಾರದು. ರಾಜಕೀಯ ಪ್ರಭಾವಕ್ಕೂ ಮಣಿಯಬಾರದು. ರೈತರ ಹಿತ ಕಾಪಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಬ್ಯಾಂಕ್ ಉಳಿದರೆ ಸಹಕಾರ ಕ್ಷೇತ್ರ ಉಳಿಯಲಿದೆ. ಬಂಡವಾಳಷಾಹಿಯ, ಸಾಹುಕಾರರ ನಡವಳಿಕೆಯನ್ನು ದಿಕ್ಕರಿಸೋಣ, ಸೋಲಿಸೋಣ ಎಂದು ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬೀದರ್ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆಯು ಸಹಕಾರ ವರ್ಸಸ್ ಸಾಹುಕಾರ ಎನ್ನುವಂತೆ ನಡೆಯುತ್ತಿದೆ. ಜಿಲ್ಲೆಯ ಸಂಸದನಾಗಿ ಸಹಕಾರ ಕ್ಷೇತ್ರವನ್ನು ಉಳಿಸುವುದು ನನ್ನ ಜವಾಬ್ದಾರಿಯಾಗಿದೆ. ಡಿಸಿಸಿ ಬ್ಯಾಂಕಿನ ಷೇರುದಾರರು, ಸಾಲಗಾರರ, ಸಿಬ್ಬಂದಿಯ, ಠೇವಣಿದಾರರ ಹಿತ ಕಾಪಾಡುವುದು ನನ್ನ ಕರ್ತವ್ಯದ ಜತೆಗೆ ನೈತಿಕ ಜವಾಬ್ದಾರಿ ಕೂಡ ಆಗಿದೆ. ‘ಡೆಲಿಗೇಟ್’ ಸದಸ್ಯರುಗಳು ಪಿಕೆಪಿಎಸ್‌ನ ರೈತರ ಹಿತ ರಕ್ಷಣೆಗಾಗಿ ಮತ ಚಲಾಯಿಸಬೇಕು. ಡಿಸಿಸಿ ಬ್ಯಾಂಕ್ ಉಳಿಸಿ, ಬೆಳೆಸುವುದರಿಂದ ರೈತರ ಹಿತ ಕಾಪಾಡಿದಂತಾಗುತ್ತದೆ ಎಂದರು.

ಡೆಲಿಗೇಟ್’ ಮತದಾರರು ಡಿಸಿಸಿ ಬ್ಯಾಂಕ್‌ ಹಾಲಿ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಪೆನಾಲ್‌ಗೆ ಮತ ನೀಡಬೇಕು. ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳಿಗೆ ಹಣ ಒದಗಿಸಿ ಅವುಗಳನ್ನು ನಡೆಯುವಂತೆ ಡಿಸಿಸಿ ಬ್ಯಾಂಕ್ ನೋಡಿಕೊಂಡಿದೆ. ಬ್ಯಾಂಕ್ ರೈತರು, ಸ್ವ ಸಹಾಯ ಗುಂಪುಗಳ ಸದಸ್ಯರ ಜೀವನಾಡಿಯಾಗಿದೆ. ಅದನ್ನು ಉಳಿಸಬೇಕು ಎಂದು ಹೇಳಿದರು.

1984ರಿಂದ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಅವರು ಹಾಗೂ ಕಳೆದ ಎಂಟು ವರ್ಷಗಳಿಂದ ಉಮಾಕಾಂತ ನಾಗಮಾರಪಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿ ಬ್ಯಾಂಕ್‌ ಅನ್ನು ಉತ್ತಮ ರೀತಿಯಲ್ಲಿ ಮುನ್ನಡೆಸಿದ್ದಾರೆ. 1984ರಲ್ಲಿ ₹1.61 ಕೋಟಿ ಠೇವಣಿ ಇತ್ತು. ಆರು ಕೋಟಿ ರೈತರಿಗೆ ಸಾಲ ನೀಡಲಾಗಿತ್ತು. 2018ರ ವರೆಗೆ ₹86 ಕೋಟಿ ಠೇವಣಿ ಹೆಚ್ಚಿಸಿ, ₹1660 ಕೋಟಿ ಸಾಲವನ್ನು ನೀಡಿ, ₹2929 ಕೋಟಿ ವಹಿವಾಟವನ್ನು ಗುರುಪಾದಪ್ಪನವರು ನಡೆಸಿದ್ದರು. ಉಮಾಕಾಂತ ನಾಗಮಾರಪಳ್ಳಿ ಅವರು ಅಧ್ಯಕ್ಷರಾದ ಬಳಿಕ ₹1600 ಕೋಟಿಯಿಂದ ₹3268 ಕೋಟಿ ಸಾಲವನ್ನು ರೈತರಿಗೆ ನೀಡಿದ್ದಾರೆ. ₹86 ಕೋಟಿಯಿಂದ ₹159 ಕೋಟಿ ಷೇರು ಹೆಚ್ಚಿಸಿದ್ದಾರೆ‌ ಎಂದು ವರ್ಣಿಸಿದರು.

₹2500 ಕೋಟಿ ಠೇವಣಿ ಇದೆ. ₹5 ಸಾವಿರ ಕೋಟಿ ಬ್ಯಾಂಕ್ ವಹಿವಾಟು ನಡೆಸಿದೆ. ಇದೆಲ್ಲವೂ ಬ್ಯಾಂಕಿನ ಆಡಳಿತ ಮಂಡಳಿ ಮೇಲಿನ ವಿಶ್ವಾಸದಿಂದಲೇ ಸಾಧ್ಯವಾಗಿದೆ. ಫಸಲ್ ಬಿಮಾ, ಸಾಲ ಮನ್ನಾ ಸೇರಿದಂತೆ ವಿವಿಧ ಯೋಜನೆಗಳಡಿ ಬ್ಯಾಂಕ್‌ನಿಂದ ರೈತರಿಗೆ ₹1800 ಕೋಟಿ ಲಾಭವಾಗಿದೆ. ಡಿಸಿಸಿ ಬ್ಯಾಂಕ್‌ನಡಿ 37 ಸಾವಿರ ಸ್ವ ಸಹಾಯ ಗುಂಪುಗಳಿದ್ದು, 5.19 ಲಕ್ಷ ಮಹಿಳಾ ಸದಸ್ಯರಿದ್ದಾರೆ. ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ಗಮನ ಸೆಳೆದಿದೆ. ದೇಶದಲ್ಲಿ ಬೀದರ್ ಮಾದರಿಯನ್ನು ಅನುಸರಿಸಲಾಗುತ್ತಿದೆ ಎಂದರು.

See also  ಔರಾದ: ಕಾರ್ಯಕರ್ತರು ಚುರುಕಿನಿಂದ ಕೆಲಸ ಮಾಡಿ - ಸಚಿವ ಪ್ರಭು ಚವ್ಹಾಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು