News Karnataka Kannada
Thursday, April 25 2024
ಬೀದರ್

ನನ್ನನ್ನು ಸಿಎಂ ಸ್ಥಾನದಿಂದ ಯಾರು ಕೆಳಗಿಳಿಸಿಲ್ಲ: ಬಿ.ಎಸ್ ಯಡಿಯೂರಪ್ಪ

Who has not removed me from the post of CM: BS Yeddyurappa
Photo Credit : News Kannada

ಔರಾದ್‌: ಬಿಜೆಪಿಯಿಂದ ಯಡಿಯೂರಪ್ಪನವರಿಗೆ ಅವರಿಗೆ ಅನ್ಯಾಯವಾಗಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ನನ್ನನ್ನು ಸಿಎಂ ಸ್ಥಾನದಿಂದ ಯಾರು ಕೆಳಗಿಳಿಸಿಲ್ಲ ನಾನೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂದೆ ಚುನಾವಣೆಗೆ ನಿಲ್ಲಲ್ಲ ಎಂದು ಹೇಳಿದ್ದೇನೆ. ಹಾಗಾಗಿ ವೀರಶೈವ ಬಂಧುಗಳು ತಪ್ಪು ಗ್ರಹಿಕೆ ಮಾಡಿಕೊಳ್ಳಬಾರದು. ಅಪಪ್ರಚಾರಗಳಿಗೆ ಕಿವಿಗೊಡದೆ ಪ್ರಭು ಚವ್ಹಾಣ ಸ್ಥಾನದಲ್ಲಿ ಯಡಿಯೂರಪ್ಪ ಅವರು ನಿಂತಿದ್ದಾರೆ ಎಂದು ಭಾವಿಸಿ ಆಶೀರ್ವಾದ ಮಾಡಬೇಕು ಎಂದು ವೀರಶೈವ ಲಿಂಗಾಯತರಲ್ಲಿ ಮನವಿ ಮಾಡಿದರು.

ಭಾರತೀಯ ಜನತಾ ಪಕ್ಷ ಔರಾದ(ಬಿ) ಮಂಡಲ ವತಿಯಿಂದ ಮೇ.3ರಂದು ಔರಾದ(ಬಿ) ಪಟ್ಟಣದ ತಹಸೀಲ್ ಕಚೇರಿ ಎದುರುಗಡೆಯ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರಭು.ಬಿ ಚವ್ಹಾಣ ಔರಾದ(ಬಿ) ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಇವರು 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ಈ ದಿಶೆಯಲ್ಲಿ ಕಾರ್ಯಕರ್ತರು ಒಂದು ವಾರ ಮನೆ-ಮಠವನ್ನು ಲೆಕ್ಕಿಸದೇ ಉತ್ಸಾಹದಿಂದ ಕೆಲಸ ಮಾಡಬೇಕೆಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದರು.

ಭಾರತೀಯ ಜನತಾ ಪಕ್ಷದಿಂದ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಕಾರ್ಯರೂಪಕ್ಕೆ ತರಲಾಗುತ್ತದೆ ಎಂದ ಅವರು, ಮಾಸಿಕ ಪಿಂಚಣಿಯನ್ನು 800 ರೂ.ನಿಂದ 2 ಸಾವಿರಕ್ಕೆ ಏರಿಸಲಾಗುವುದು. ಬಿಪಿಎಲ್ ಕುಟುಂಬಗಳಿಗೆ ಪ್ರತಿ ವರ್ಷ ಯುಗಾದಿ, ಗಣೇಶ ಚತುರ್ಥಿ ಹಾಗೂ ದೀಪಾವಳಿಗೆ ತಲಾ ಒಂದರAತೆ ಉಚಿತವಾಗಿ ಮೂರು ಅಡುಗೆ ಸಿಲೆಂಡರ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.

ಬಡ ಕುಟುಂಬಗಳಿಗೆ ಪ್ರತಿ ದಿನ ಅರ್ಧ ಲೀಟರ್ ನಂದಿನಿ ಹಾಲು ಮತ್ತು ಪ್ರತಿ ತಿಂಗಳು 5 ಕೆ.ಜಿ ಅಕ್ಕಿ ಕೊಡಲಾಗುತ್ತದೆ. ನೀರಾವರಿಗೆ ಹೆಚಿನ ಆದ್ಯತೆ ನೀಡಲಾಗಿದೆ. ಪ್ರತಿ ಲೀಟರ್ ಹಾಲಿಗೆ ಪ್ರೋತ್ಸಾಹಧನ 5 ರೂ.ನಿಂದ 7 ಏಳು ರೂ.ಗೆ ಹೆಚ್ಚಿಸಲಾಗುತ್ತದೆ. ರೈತಸಿರಿ ಯೋಜನೆಯಡಿ ಸಿರಿಧಾನ್ಯಗಳನ್ನು ಬೆಳೆಯುವಂಥ ರೈತರಿಗೆ ಪ್ರತಿ ಹೇಕ್ಟರ್‌ಗೆ ನೀಡುವ ಸಹಾಯಧನವನ್ನು 10 ಸಾವಿರದಿಂದ 15 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ. ಕೃಷಿ ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ಸಾಗಿಸುವ ರೈತರಿಗೆ ಉಚಿತ ಬಸ್ ಟಿಕೆಟ್ ಸೌಲಭ್ಯ ಕೊಡಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ 10 ಲಕ್ಷ ಮನೆಗಳನ್ನು ಕಟ್ಟಬೇಕು ಎನ್ನುವುದು ಪ್ರಧಾನಮಂತ್ರಿಯವರ ಅಪೇಕ್ಷೆಯಾಗಿದೆ. ರಾಜ್ಯದಲ್ಲಿ ಎಲ್ಲ ಬಡವರಿಗೆ ಮನೆಗಳನ್ನು ಕಲ್ಪಿಸುವ ದಿಶೆಯಲ್ಲಿ ಎನ್ನುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗುತ್ತಿದೆ. ಬಡವನ ಮನೆಯಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದೆಂಬ ಉದ್ದೇಶದಿಂದ ಭಾಗ್ಯಲಕ್ಷಿ ಯೋಜನೆ ಜಾರಿಗೆ ತಂದಿದ್ದೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕೊಡಲಾಗುತ್ತಿದೆ. ಮುಖ್ಯಮಂತ್ರಿಯಾಗಿದ್ದಾಗ ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಿದ್ದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಬಸವಕಲ್ಯಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಶಾಲಾ ಮಕ್ಕಳಿಗೆ ಉಚಿತ ಬೈಸಿಕಲ್ ವಿತರಣೆಯಂತಹ ಹಲವು ಯೋಜನೆಗಳನ್ನು ಬಿಜೆಪಿ ಸರ್ಕಾರದಿಂದ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಮಾತನಾಡಿ, ಪ್ರಭು.ಬಿ ಚವ್ಹಾಣ ಒಳ್ಳೆಯ ವ್ಯಕ್ತಿ. ಶಾಸಕರಾಗಿ ಮತ್ತು ಸಚಿವರಾಗಿ ಜನಪ್ರಿಯ ಕೆಲಸಗಳನ್ನು ಮಾಡಿದ್ದಾರೆ. ಕೆಲವರು ಪಕ್ಷ ಬಿಟ್ಟು ಹೋದರೆ ಯಾವುದೇ ಪರಿಣಾಮ ಬೀರದು ಹೆಚ್ಚು ಮತಗಳ ಅಂತರದಿಂದ ಜನತೆ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಿಸಾನ್ ಸಮ್ಮಾನ್ ಯೋಜನೆ, ಶೌಚಾಲಯ, ಹಳ್ಳಿ ಹಳ್ಳಿಗೆ ರಸ್ತೆ, ಪ್ರತಿ ತಿಂಗಳು ಪಡಿತರ, ಕೋವಿಡ್ ಸಂದರ್ಭದಲ್ಲಿ ಉಚಿತವಾಗಿ ಎರಡೆರಡು ಲಸಿಕೆಗಳನ್ನು ನೀಡುವುದು ಒಳಗೊಂಡು ಪ್ರತಿಯೊಬ್ಬರು ಒಂದಿಲ್ಲೊಂದು ರೀತಿಯಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರದ ಫಲಾನುಭವಿಯಾಗಿದ್ದಾರೆ. ರಾಜ್ಯದಲ್ಲಿ 130 ರಿಂದ 150 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ. ಪುನಃ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಹೇಳಿದರು.

ಬಿಜೆಪಿ ಅಭ್ಯರ್ಥಿ ಪ್ರಭು.ಬಿ ಚವ್ಹಾಣ ಅವರು ಮಾತನಾಡಿ, ನಾನು ಔರಾದನ 4 ಲಕ್ಷ ಜನತೆಯ ಸೇವಕ. ಜನರನ್ನು ನಾನು ದೇವರ ರೂಪದಲ್ಲಿ ಕಾಣುತ್ತೇನೆ. ಮೂರು ಅವಧಿಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡಿದ್ದೇನೆ. ಸರ್ಕಾರದ ಯೋಜನೆಗಳನ್ನು ಅರ್ಹರ ಮನೆ-ಮನೆಗೆ ತಲುಪಿಸಲು ಪ್ರಯತ್ನಿಸಿದ್ದೇನೆ. ಪ್ರಧಾನಿಯವರ ಆಶಯದಂತೆ ಜನತೆಯೊಂದಿಗೆ ಮತ್ತು ರೈತರೊಂದಿಗೆ ಬೆರೆಯಬೇಕು ಎನ್ನುವ ಆಶಯದಂತೆ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಔರಾದನಲ್ಲಿ ಶಿಕ್ಷಣ ಕ್ಷೇತ್ರ ಪ್ರಗತಿಯಾಗಬೇಕು. ರೈತರು ಮತ್ತು ಬಡವರ ಮಕ್ಕಳು ಉನ್ನತ ಶಿಕ್ಷಣ ಪಡೆದು ಉತ್ತಮ ಹುದ್ದೆಗಳನ್ನು ಅಲಂಕರಿಸಬೇಕು. ಈ ದಿಶೆಯಲ್ಲಿ ಪ್ರತಿ ವರ್ಷ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಪ್ರೋತ್ಸಾಹಿಸಿ ಮನೋಬಲ ವೃದ್ಧಿಸುವ ಕೆಲಸ ಮಾಡುತ್ತಾ ಬಂದಿದ್ದೇನೆ. ಯಾರೆಷ್ಟೇ ಪ್ರಯತ್ನಿಸಿದರೂ ಜನತೆ ನನ್ನೊಂದಿಗಿದ್ದಾರೆ. ಹಿಂದೆಂದಿಗಿಂತಲೂ ಹೆಚ್ಚು ಮತಗಳಿಂದ ಗೆಲ್ಲಿಸುವ ಮೂಲಕ ಕ್ಷೇತ್ರದಲ್ಲಿ ಪುನಃ ಕಮಲವನ್ನು ಅರಳಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವಾನಂದ ಮಂಠಾಳಕರ್, ನಾಂದೇಡ್ ಜಿಲ್ಲೆಯ ಬಿಜೆಪಿ ಅಧ್ಯಕ್ಷರಾದ ವೆಂಕಟರಾವ ಪಾಟೀಲ ಗೊಜೆಗಾಂವಕರ್, ಮಹಾರಾಷ್ಟ್ರ ರಾಜ್ಯದ ಬಿಜೆಪಿ ವಕ್ತಾರರಾದ ಗಣೇಶ ದಾದಾ ಹಕ್ಕೆ, ಮುಖಂಡರಾದ ನಾಮದೇವರಾವ ಕದಂ, ಸುಧಾಕರ್ ಭಾಲೆರಾವ, ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಸುರೇಶ ಭೋಸ್ಲೆ, ಅರಹಂತ ಸಾವಳೆ, ಕಿರಣ ಪಾಟೀಲ, ಶರಣಪ್ಪ ಪಂಚಾಕ್ಷರಿ, ದೊಂಡಿಬಾ ನರೋಟೆ, ರಾಮ ನರೋಟೆ, ಕೇರಬಾ ಪವಾರ, ಸಂತೋಷ ಪೋಕಲವಾರ, ಸತೀಷ ಪಾಟೀಲ, ಶಿವಾನಂದ ವಡ್ಡೆ, ಬಸವರಾಜ ಪಾಟೀಲ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ಶಿವಾಜಿ ಪಾಟೀಲ ಮುಂಗನಾಳ, ಅಶೋಕ ಅಲ್ಮಾಜೆ, ಸೂರ್ಯಕಾಂತ ಅಲ್ಮಾಜೆ, ಶಿವರಾಜ ಅಲ್ಮಾಜೆ, ಶಕುಂತಲಾ ಮುತ್ತಂಗೆ, ಅಂಬಿಕಾ ಕೇರಬಾ ಪವಾರ, ಎಂ.ಡಿ ಸಲಾವುದ್ದಿನ್, ಬಸವರಾಜ ಹಳ್ಳೆ, ಶ್ರೀನಿವಾಸ ಖೂಬಾ, ಪ್ರಕಾಶ ಜೀರ್ಗೆ, ಸಂಜು ಮುರ್ಕೆ, ರವೀಂದ್ರ ರೆಡ್ಡಿ, ರಾಜಕುಮಾರ ಸೋರಳ್ಳೆ, ಬಂಟಿ ರಾಂಪೂರೆ, ಉದಯ ಸೋಲಾಪೂರೆ, ಸಚಿನ್ ಬಿರಾದಾರ ಹಾಗೂ ಇತರರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು