ಕಲಬುರಗಿ: ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದರೂ ಸದಸ್ಯತ್ವ ನೋಂದಣಿ ಅಭಿಯಾನ ಪ್ರಗತಿ ಪರಿಶೀಲನೆಗೆ ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಿಆರ್ ಓ ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಎಲ್ಲ ಶಾಸಕರು, ನಾಯಕರು ತಮ್ಮ ಕೆಲಸ ಬಿಟ್ಟು ಇಲ್ಲಿಗೆ ಬಂದಿದ್ದು, ಇಷ್ಟೆಲ್ಲಾ ನಾಯಕರು ಇಲ್ಲಿಗೆ ಬಂದಿರುವುದನ್ನು ನೋಡಿ ಈ ಸದಸ್ಯತ್ವ ಅಭಿಯಾನದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ರಾಜಾಪುರ ರಸ್ತೆಯಲ್ಲಿನ ಜೈ ಭವಾನಿ ಪಂಕಶನ್ ಪ್ಯಾಲೇಸ್, ನಲ್ಲಿ ನಡೆದ ಸದಸ್ಯತ್ವದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪಕ್ಷದ ಸದಸ್ಯರಾಗುವುದೇ ಭಾಗ್ಯ. ನಿಮ್ಮ ಜಿಲ್ಲೆಯಲ್ಲಿ 74 ಸಾವಿರ ಸದಸ್ಯತ್ವ ಆಗಿದೆ. ನನ್ನ ಕ್ಷೇತ್ರದಲ್ಲೇ 76 ಸಾವಿರ ಸದಸ್ಯತ್ವ ಆಗಿದೆ. ಗಂಗಾವತಿಯಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು 60 ಸಾವಿರ ಸದಸ್ಯತ್ವ ಮಾಡಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಿಮ್ಮ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಲ್ಲಿ 26 ಸಾವಿರ ಸದಸ್ಯತ್ವವನ್ನು ಮಾಡಲಾಗಿದೆ. ಉಳಿದ ಕ್ಷೇತ್ರಗಳಲ್ಲಿ ಸದಸ್ಯತ್ವ ಮಾಡಲು ಇರುವ ಸಮಸ್ಯೆಗಳೇನು?
ಮನೆ ಮನೆಗೆ ಮತದಾರರ ಪಟ್ಟಿ ತೆಗೆದುಕೊಂಡು ಹೋಗಿ 5 ರೂ. ಶುಲ್ಕ ಪಡೆದು ಸ್ಮಾರ್ಟ್ ಫೋನ್ ನಲ್ಲಿ ಸದಸ್ಯತ್ವ ನೋಂದಣಿ ಮಾಡುವುದಷ್ಟೇ ಕೆಲಸ. ಪ್ರತಿ ಬೂತ್ ಮಟ್ಟದಲ್ಲಿ ಒಂದು ಗಂಡು ಹಾಗೂ ಹೆಣ್ಣು ಮಗಳನ್ನು ನೋಂದಣಿದಾರರನ್ನಾಗಿ ಮಾಡಲಾಗಿದೆ. ಸದಸ್ಯತ್ವ ನೋಂದಣಿಗೆ ಮಹಿಳೆಯರು ತಮ್ಮ ಮಾಹಿತಿ ನೀಡಲು ಹಿಂಜರಿಯಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಮಾಡಲಾಗಿದೆ ಎಂದರು.
ರಾಜ್ಯದಲ್ಲಿ ಇದುವರೆಗೂ 30 ಲಕ್ಷ ಸದಸ್ಯತ್ವ ಮಾಡಲಾಗಿದೆ. ನಮಗಿಂತ ಸಣ್ಣ ರಾಜ್ಯ ತೆಲಂಗಾಣದಲ್ಲಿ 40 ಲಕ್ಷ ಸದಸ್ಯತ್ವ ಮಾಡಲಾಗಿದೆ.
ಎಐಸಿಸಿ ಅವರು ಬ್ಲಾಕ್ ಮಟ್ಟದಿಂದ, ಜಿಲ್ಲಾ ಮಟ್ಟ ಹಾಗೂ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ದಿನಾಂಕ ಘೋಷಣೆ ಮಾಡಲಾಗುವುದು. ನೀವು ನಾಯಕರಾಗಬೇಕಾದರೆ, ನೀವು ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕಾದರೆ, ಸದಸ್ಯತ್ವ ನೋಂದಣಿ ಮಾಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾಯಾ೯ಧ್ಯಕ್ಷ ಈಶ್ವರ ಖಂಡ್ರೆ,ಶಾಸಕ ಎಂ.ವೈ.ಪಾಟೀಲ್, ಖನೀಜ್ ಫಾತೀಮಾ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ್, ಬಿ.ಆರ.ಪಾಟೀಲ್, ಅಲ್ಲಂಪ್ರಭು ಪಾಟೀಲ್, ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು