ಕಾಸರಗೋಡು: ತೆಂಗಿಗೆ ಹುಳಬಾಧೆ ಮತ್ತೆ ಕಂಡು ಬಂದಿದೆ. ಕೇರಳ ಸೇರಿದಂತೆ ಕರಾವಳಿಯ ಹಲವೆಡೆಗಳಲ್ಲಿ ತೆಂಗುಗಳು ಹಳದಿ ಬಣ್ಣಕ್ಕೆ ತಿರುಗಿದೆ. ಕೆಲ ವರ್ಷಗಳ ಹಿಂದೆ ಕಂಡು ಬಂದು ಬಳಿಕ ದೂರವಾಗಿದ್ದ ಹುಳು ಬಾಧೆ ಇದೀಗ ಬಿಸಿಲ ತಾಪ ಹೆಚ್ಚುತ್ತಿದ್ದಂತೆ ವಕ್ಕರಿಸತೊಡಗಿದೆ.
ಆರಂಭದಲ್ಲಿ ಈ ಕೀಟ ಬಾಧೆಗೆ ಕಡಿವಾಣ ಹಾಕದಿದ್ದಲ್ಲಿ ತೆಂಗಿಗೆ ಮಾರಕವಾಗಿ ಈ ಹುಳುಬಾಧೆ ಪರಿಣಮಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ತೆಂಗಿನ ಮಡಲು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗಿ ಫಸಲು ಸಂಪೂರ್ಣ ಕುಸಿಯುತ್ತಿದೆ.
ಜಿಲ್ಲೆಯ ನೀಲೇಶ್ವರ, ಕಾಪಾಡ್, ಪರಪ್ಪನಂಗಡಿ ಇತರ ಪ್ರದೇಶಗಳಲ್ಲಿ ಈ ಕೀಟಬಾಧೆ ಉಂಟಾಗಿದೆ. ಉಳ್ಳಾಲದಲ್ಲೂ ಕೀಟಬಾಧೆ ಪತ್ತೆಯಾಗಿದೆ ಎನ್ನಲಾಗಿದೆ. ವೇಗವಾಗಿ ಒಂದು ಮರದಿಂದ ಇನ್ನೊಂದು ಮರಕ್ಕೆ ಈ ಕೀಟಬಾಧೆ ಹರಡುತ್ತಿದೆ. ಮಡಲಿನ ಅಡಿಭಾಗದಲ್ಲಿ ಹುಳುಗಳು ಉತ್ಪತ್ತಿಯಾಗುತ್ತಿದ್ದು, ಇದು ಒಂದು ಮರದಿಂದ ಇನ್ನೊಂದು ಮರಕ್ಕೆ ವೇಗವಾಗಿ ಹರಡುತ್ತಿದೆ.
ಕೀಟಬಾಧೆ ಹರಡುತ್ತಿದ್ದರೂ ಕೃಷಿ ಇಲಾಖೆ ನಿಯಂತ್ರಣಕ್ಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಕೇಂದ್ರ ತೋಟಗಾರಿಕಾ ಸಂಶೋಧನಾ ಕೇಂದ್ರವು ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತನೆ ನಡೆಸಿದ್ದು , ರೋಗ ನಿಯಂತ್ರಣ ಕುರಿತು ಈಗಾಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದೆ. ಆದರೂ ಕೀಟ ಬಾಧೆ ದೊಡ್ಡ ಸವಾಲಾಗಿ ಪರಿಣಮಿಸಿದೆ.