ಸುಳ್ಯ: ಡೀಮ್ಡ್ ಫಾರೆಸ್ಟ್ ಸಮಸ್ಯೆ, ರಸ್ತೆ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಅರಣ್ಯದ ಅಡ್ಡಿ ಉಂಟಾಗುತ್ತಿರುವ ಬಗ್ಗೆ ಚರ್ಚಿಸಿ ಸಮನ್ವಯ ಸಾಧಿಸುವ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ಚನಿಯ ಕಲ್ತಡ್ಕ ನೇತೃತ್ವದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿಶೇಷ ಸಭೆ ನಡೆಸಲು ಗುರುವಾರ ನಡೆದ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮತ್ತು ನಿವೇಶನ ಕಾದರಿಸಲು ಅರಣ್ಯ ಅಡ್ಡಿ ಬರುತ್ತಿರುವ ಬಗ್ಗೆ ಸಭೆಯಲ್ಲಿ ಸುಧೀರ್ಘ ಚರ್ಚೆ ನಡೆಯಿತು. ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.
ಸುಳ್ಯ ತಾಲೂಕು ಕಚೇರಿಯಲ್ಲಿ ಸಿಬ್ಬಂದಿಗಳೇ ಇರುವುದಿಲ್ಲ ಕೆಲವರು ಬೆಳಗ್ಗೆ ಬಂದು ಹಾಜರಿ ಹಾಕಿ ಹೊರಗೆ ಹೋಗುತ್ತಾರೆ ಎಂದು ಸಾರ್ವಜನಿಕರಿಂದ ದೂರು ಇದೆ ಎಂದು ಸದಸ್ಯ ರಾಧಾಕೃಷ್ಣ ಬೊಳ್ಳೂರು ಆರೋಪಿಸಿದರು. ತಮ್ಮ ಕೆಲಸಕ್ಕಾಗಿ ದೂರದ ಪ್ರದೇಶದಿಂದ ಬರುವ ಜನರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತ ಪಡಿಸಿದರು. ದೂರದೂರಿನ ಕೆಲವು ಸಿಬ್ಬಂದಿಗಳು ಹಬ್ಬದ ಕಾರಣ ರಜೆ ಹಾಕಿ ಹೋಗಿದ್ದಾರೆ. ಹಾಜರಿ ಹಾಕಿ ಯಾರೂ ಹೊರಗೆ ಹೋಗುವುದಿಲ್ಲ ಎಂದು ಸಭೆಯಲ್ಲಿದ್ದ ಕಂದಾಯ ಇಲಾಖೆಯ ಅಧಿಕಾರಿ ಹೇಳಿದರು. ನಾನು ಸರಿಯಾಗಿ ತಿಳಿದೇ ವಿಚಾರವನ್ನು ಮಾತನಾಡುತ್ತಿದ್ದೇನೆ. ತಾಲೂಕು ಕಚೇರಿಯಲ್ಲಿ ಅಧಿಕಾರಿ ಮತ್ತು ಸಿಬ್ಬಂಗಳ ಸೇವೆ ಜನರಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಬೊಳ್ಳೂರು ಹೇಳಿದರು.
ಗ್ರಾ.ಪಂ. ಅವಧಿ ಮುಗಿದ ಬಳಿಕ ಇದೀಗ ಪಂಚಾಯತ್ ನಲ್ಲಿ ಯಾವುದು ಕೆಲಸಗಳು ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಕಾರ್ಯನಿರ್ವಾಹಣಾಧಿಕಾರಿಯವರು ಗಮನ ಹರಿಸಬೇಕು ಎಂದು ಎಂದು ಸದಸ್ಯರು ಹೇಳಿದರು. ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸಾರ್ವಜನಿಕರು ತೀವೃ ಸಮಸ್ಯೆ ಎದುರಿಸುವಂತಾಗಿದೆ. ಕಡತಗಳ ವಿಲೇವಾರಿ ಕಾಲಕ್ಕೆ ಆಗುವುದಿಲ್ಲ. ಅಧಿಕಾರಿಗಳ ಅಸಹಾಕಾರದಿಂದ ಜನಪ್ರತಿನಿಧಿಗಳಿಗೂ ಜನರ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ಸದಸ್ಯ ಅಬ್ದುಲ್ ಗಫೂರ್ ಹೇಳಿದರು. ಸ್ವಾಮಿತ್ತ ಯೋಜನೆ ಸುಳ್ಯ ತಾಲೂಕಿನಲ್ಲಿ ಪ್ರಾಯೋಗಿಕವಾಗಿ ಕಷ್ಟ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ತಾ.ಪಂ.ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್, ಸದಸ್ಯರುಗಳಾದ ತೀರ್ಥರಾಮ ಬಾಳಾಜೆ, ಉದಯ ಕೊಪ್ಪಡ್ಕ, ವಿದ್ಯಾಲಕ್ಷ್ಮೀ, ಯಶೋದ ಬಾಳೆಗುಡ್ಡೆ, ಪದ್ಮಾವತಿ ಕುಡೆಂಬಿ, ಚರ್ಚೆಯಲ್ಲಿ ಭಾಗವಹಿಸಿದ್ದರು.