ಕಾಸರಗೋಡು: ನಕಲಿ ನೋಟು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಅಪರಾಧ ಪತ್ತೆದಳದ ಸಿಬಂದಿಗಳು ಬಂಧಿಸಿದ್ದಾರೆ.
ಬಂಧಿತನನ್ನು ಸುರತ್ಕಲ್ ಕೃಷ್ಣಾಪುರದ ಎಂ.ಶರೀಫ್ (48) ಎಂದು ಗುರುತಿಸಲಾಗಿದೆ. ಹಲವು ವರ್ಷಗಳಿಂದ ಈತ ತಲೆಮರೆಸಿಕೊಂಡಿದ್ದನು. 2002ರಲ್ಲಿ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕಲಿ ನೋಟು ವಶಪಡಿಸಿಕೊಂಡ ಆರೋಪದಲ್ಲಿ ಈತ ಪ್ರಮುಖ ಆರೋಪಿಯಾಗಿದ್ದಾನೆ. ಬಂಧಿತನಾಗಿದ್ದ ಈತ 2008ರ ಬಳಿಕ ತಲೆಮರೆಸಿಕೊಂಡಿದ್ದನು. ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ತಪ್ಪಿಸಿಕೊಂಡಿದ್ದನು.
ಈತನಿಗಾಗಿ ಪೊಲೀಸರು ಕಳೆದ ಹಲವು ವರ್ಷಗಳಿಂದ ಶೋಧ ನಡೆಸುತ್ತಾ ಬರುತ್ತಿದ್ದರು. ಆದರೆ ಈತ ತಲೆ ಮರೆಸಿಕೊಂಡಿದ್ದನು. ಶರೀಫ್, ಆರೋನ್, ಮುನೀರ್ ಎಂಬ ಹೆಸರಿನಿಂದ ಕರ್ನಾಟಕದ ಹಲವೆಡೆ ಈತ ತಲೆಮರೆಸಿಕೊಂಡಿದ್ದನು. ಮೊಬೈಲ್ ಸಿಮ್ ಗಳನ್ನು ಆಗಾಗ ಬದಲಾಯಿಸುತ್ತಿದ್ದನು. ಈ ನಡುವೆ ಲಭಿಸಿದ ಖಚಿತ ಮಾಹಿತಿಯಂತೆ ವಾಮಂಜೂರು ನಿಂದ ಅಪರಾಧ ಪತ್ತೆ ದಳದ ಸಿಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾದರು. ಪೊಲೀಸರನ್ನು ಕಂಡು ಪರಾರಿಯಾಗಲೆತ್ನಿಸಿದ ಈತನನ್ನು ಬೆನ್ನಟ್ಟಿ ಬಂಧಿಸಲಾಯಿತು.