ಸುಳ್ಯ: ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ನಡೆಸಿದ ರಾಷ್ಟ್ರ ವ್ಯಾಪಿ ಮುಷ್ಕರದ ಅಂಗವಾಗಿ ಸುಳ್ಯದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯುತು.
ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು ಮತ್ತು ತಡೆ ಹಿಡಿದಿರುವ ಕಾರ್ಮಿಕರ ಸವಲತ್ತುಗಳನ್ನು ಶೀಘ್ರ ಒದಗಿಸಬೇಕು ಎಂದು ಟ್ರೇಡ್ ಯೂನಿಯನ್ ಸಂಘಟನೆಗಳ ಒಕ್ಕೂಟದ ವತಿಯಿಂದ ಸುಳ್ಯ ಬಸ್ ನಿಲ್ದಾಣದ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಆಗ್ರಹಿಸಲಾಯಿತು.
ಸಿಐಟಿಯು ತಾಲೂಕು ಅಧ್ಯಕ್ಷ ಕೆ.ಪಿ.ಜಾನಿ, ಸಿಪಿಐಎಂ ತಾಲೂಕು ಕಾರ್ಯದರ್ಶಿ ರಾಬರ್ಟ್ ಡಿಸೋಜಾ, ರೈತ ಸಂಘದ ಮುಖಂಡ ಅಶೋಕ್ ಎಡಮಲೆ, ರೈತ ಸಂಘದ ತಾಲೂಕು ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಮಾತನಾಡಿದರು. ಕಟ್ಟಡ ಕಾರ್ಮಿಕ ಸಂಘಟನೆಯ ಅಧ್ಯಕ್ಷ ನಾಗರಾಜ್ ಹೆಚ್.ಕೆ, ಕಾರ್ಯದರ್ಶಿ ಬಿಜು ಅಗಷ್ಟಿನ್, ಕೋಶಾಧಿಕಾರಿ ವಿಶ್ವನಾಥ ನೆಲ್ಲಿಬಂಗಾರಡ್ಕ, ಸಂಘಟನೆಗಳ ಪ್ರಮುಖರಾದ ಶಿವರಾಮ ಗೌಡ, ನಾಗರಾಜ ಕಲ್ಲುಮುಟ್ಲು, ಶ್ರೀಧರ, ದಿವಾಕರ ಪೈ, ಸೆಬಾಷ್ಟಿಯನ್ ಮಡಪ್ಪಾಡಿ, ರಿಕ್ಷಾ ಯೂನಿಯನ್ನ ಮಹಮ್ಮದ್, ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು. ಕಟ್ಟಡ ಕಾರ್ಮಿಕ ಸಂಘಟನೆ, ಬೀಡಿ ಕಾರ್ಮಿಕರ ಸಂಘಟನೆ, ಬಿಸಿ ಊಟ ಕಾರ್ಮಿಕರ ಸಂಘಟನೆ, ರಿಕ್ಷಾ ಯೂನಿಯನ್, ಬ್ಯಾಂಕ್ ನೌಕರರ ಯೂನಿಯನ್ ಮತ್ತಿತರ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.