ಸುಳ್ಯ: ಸುಳ್ಯ ಮತ್ತು ಕಡಬ ತಾಲೂಕು ಒಳಗೊಂಡ ಸುಳ್ಯ ವಿಧಾನಸಭಾ ಕ್ಷೇತ್ರದ ಒಂಭತ್ತು ರಸ್ತೆಗಳ ಅಭಿವೃದ್ಧಿಗೆ 25 ಕೋಟಿ ರೂ ಬಿಡುಗಡೆ ಮಾಡುವಂತೆ ಶಾಸಕ ಎಸ್.ಅಂಗಾರ ರಾಜ್ಯ ಉಪಮುಖ್ಯಮಂತ್ರಿ ಹಾಗು ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಮಲೆನಾಡು ತಾಲೂಕಾದ ಸುಳ್ಯದ ರಸ್ತೆಗಳು ಮಳೆಯಿಂದ ತೀವ್ರ ಹಾನಿಗೀಡಾಗಿದ್ದು ವಾಹನ ಹಾಗೂ ಜನ ಸಂಚಾರಕ್ಕೆ ಅನಾನುಕೂಲ ಆಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸುಳ್ಯ ತಾಲೂಕಿನ ಎಲಿಮಲೆ – ಅರಂತೋಡು ರಸ್ತೆಗೆ 5 ಕೋಟಿ, ಪುದ್ದೊಟ್ಟು – ಬೆಳ್ಳಾರೆ ರಸ್ತೆಗೆ ಒಂದು ಕೋಟಿ, ಬೈತಡ್ಕ -ಮಂಡೆಕೋಲು ರಸ್ತೆಗೆ ಎರಡು ಕೋಟಿ, ಗುತ್ತಿಗಾರು – ಕಮಿಲ- ಬಳ್ಪ ರಸ್ತೆಗೆ 3 ಕೋಟಿ, ಸುಳ್ಯ – ಆಲೆಟ್ಟಿ – ಬಡ್ಡಡ್ಕ – ಕೂರ್ನಡ್ಕ ರಸ್ತೆಗೆ 3 ಕೋಟಿ, ಬೊಬ್ಬೆಕೇರಿ – ಅಯ್ಯನಕಟ್ಟೆ ರಸ್ತೆಗೆ 3 ಕೋಟಿ, ಮಲಯಾಳ – ಹರಿಹರ – ಕೊಲ್ಲಮೊಗ್ರು – ಕಲ್ಮಕಾರು ರಸ್ತೆಗೆ ಒಂದು ಕೋಟಿ, ಕಡಬ ತಾಲೂಕಿನ ಪುದ್ದೊಟ್ಟು-ಬೆಳ್ಳಾರೆ ರಸ್ತೆ ಅಭಿವೃದ್ಧಿಗೆ 4 ಕೋಟಿ, ಪೆರಾಬೆ ಗ್ರಾಮದ ಪೆರಾಬೆ – ಬೀರಂತ್ತಡ್ಕ-ಮುರಚಡಾವು ರಸ್ತೆ ಅಭಿವೃದ್ದಿಗೆ 3 ಕೋಟಿ ಸೇರಿ ಹೀಗೆ ಒಟ್ಟು 25 ಕೋಟಿ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಸುಳ್ಯ ಕ್ಷೇತ್ರದ 12 ರಸ್ತೆಗಳನ್ನು ಜಿಲ್ಲಾ ಮುಖ್ಯ ರಸ್ತೆಯಾಗಿ ಇತ್ತೀಚೆಗೆ ಮೇಲ್ದರ್ಜೆಗೇರಿಸಲಾಗಿದ್ದು ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸುವ ದೃಷ್ಠಿಯಿಂದ ಅನುದಾನಕ್ಕೆ ಬೇಡಿಕೆ ಸಲ್ಲಸಲಾಗಿದೆ. ಅನುದಾನ ಬಿಡುಗಡೆ ಆಗುವ ನಿರೀಕ್ಷೆ ಇದೆ ಎಂದು ಶಾಸಕ ಅಂಗಾರ ತಿಳಿಸಿದ್ದಾರೆ.